ಕಾರ್ಕಳ : ಬೈಲೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಪರಶುರಾಮ ಥೀಮ್ ಪಾರ್ಕ್ ಯೋಜನೆಯು ಹಲವು ವರ್ಷಗಳ ಹಿಂದಿನದಾಗಿದ್ದು, ಕಳೆದ ಒಂದು ವರ್ಷದ ಹಿಂದೆ ಕೈಗೊಂಡಿರುವ ಫಲಶ್ರಮದಿಂದಾಗಿ ಇಡೀ ವಿಶ್ವವೇ ಕಾರ್ಕಳದತ್ತ ನೋಟ ಬೀರಿಸುವಂತೆ ಮಾಡಿದೆ. ಆ ಮೂಲಕ ದೇಶದಲ್ಲಿ ಅತೀ ಎತ್ತರದ ಪರಶುರಾಮನ ಪ್ರತಿಮೆ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖಾ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಜ. 18 ಬುಧವಾರದಂದು ಪರಶುರಾಮ ಥೀಮ್ ಪಾರ್ಕ್ ಕಾರ್ಯಾಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಶುರಾಮ ಥೀಮ್ ಪಾರ್ಕ್ ಕೇವಲ ಪ್ರವಾಸೋದ್ಯಮಕ್ಕೆ ಮಾತ್ರ ಸೀಮಿತವಾಗದೆ ಧಾರ್ಮಿಕ ಕೇಂದ್ರವಾಗಿಯೂ ಕಂಗೊಳಿಸಲಿದೆ. ಥೀಮ್ ಪಾರ್ಕ್ನಲ್ಲಿ ಭಜನಾ ಮಂದಿರ, ಚಿತ್ರಮಂದಿರ ನಿರ್ಮಾಣ ಮಾಡಲಾಗಿದೆ.ಆ ಮೂಲಕ ಭಾರತೀಯ ಪರಂಪರೆಯ ಪ್ರತಿಬಿಂಬಿಸಲಾಗುವುದು.
ಲೋಕಾರ್ಪಣೆಗೈಯಲಿರುವ ಮುಖ್ಯಮಂತ್ರಿ
ಜ. 27 ರಂದು ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮ ಜರಗಲಿದೆ. ಕರ್ನಾಟಕ ಘನ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಕಾಂತಾರ ಚಲನ ಚಿತ್ರದ ರಿಷಬ್ ಶೆಟ್ಟಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದಾರೆ ಎಂದರು.
ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ವಿನಯ್ ಹೆಗ್ಡೆ , ಪರಶುರಾಮನಾರಾಧಕನಾಗಿದ್ದೇನೆ. ತುಳುನಾಡಿನ ಸೃಷ್ಟಿಕರ್ತ ಪರಶುರಾಮನ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಾಣವಾಗುತ್ತಿರುವುದು ಹಾಗೂ ಅದರ ಕಚೇರಿ ಉದ್ಘಾಟನೆ ನೆರವೇರಿಸುವ ಕಾರ್ಯ ನನ್ನ ಪಾಲಿಗೆ ದೊರಕಿರುವುದು ಅದೃಷ್ಟವಾಗಿದೆ. ಶಿಕ್ಷಣ, ಧಾರ್ಮಿಕ, ಪ್ರವಾಸೋದ್ಯಮ ಅಭಿವೃದ್ಧಿ ಯಿಂದ ಕಾರ್ಕಳ ಗುರುತಿಸುವಂತಾಗಲಿ ಎಂದರು.
ಕಾರ್ಕಳ ವೆಂಕಟರಮಣ ದೇವಸ್ಥಾನದ ಒಂದನೇ ಮೊತ್ತೇಸರ ಜಯರಾಮ್ ಪ್ರಭು, ಅಡಪ್ಪಾಡಿ ಪಳ್ಳಿ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಪುಂಡಲೀಕ ನಾಯಕ್ ಇವರು ಸಂದಭೋಚಿತವಾಗಿ ಮಾತನಾಡಿ ಶುಭಾಸಂಸನೆ ಗೈದರು.
ಡಾ.ದಿನೇಶ್ಚಂದ್ರ ಹೆಗ್ಡೆ, ಎಸ್ಡಿಸಿಸಿ ಬ್ಯಾಂಕ್ ನಿರ್ದೆಶಕ ಭಾಸ್ಕರ್ ಕೋಟ್ಯಾನ್, ಬೈಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕರುಣಾಕರ್ ಹೆಗ್ಡೆ, ಕಿಶನ್ ಹೆಗ್ಡೆ ಬೈಲೂರು, ಉದ್ಯಮಿ ಸುಧೀರ್ ಹೆಗ್ಡೆ, ಯರ್ಲಪಾಡಿ ಗ್ರಾ. ಪಂ. ಅಧ್ಯಕ್ಷೆ ಪ್ರಮೀಳಾ ಪೂಜಾರಿ, ಬೈಲೂರು ಗ್ರಾ. ಪಂ. ಅಧ್ಯಕ್ಷ ಜಗದೀಶ್ ಪೂಜಾರಿ, ನೀರೆ ಗ್ರಾ. ಪಂ. ಅಧ್ಯಕ್ಷೆ ಶಾಲಿನಿ, ವಕೀಲ ಎಂ. ಕೆ. ವಿಜಯ್ ಕುಮಾರ್, ಹೆಬ್ರಿ ತಹಶೀಲ್ದಾರ್ ಪುರಂದರ್, ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ. ಎನ್., ಶಶಿಧರ್, ಡಿವೈಎಸ್ಪಿ ವಿಜಯಪ್ರಸಾದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಪೂರ್ಣಿಮಾ ಮೊದಲಾದವರು ಉಪಸ್ಥಿತರಿದ್ದರು.
ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಸ್ವಾಗತಿಸಿದರು. ಹರೀಶ್ ನಾಯಕ್ ನಿರೂಪಿಸಿದರು. ಆನಂದ ಪೂಜಾರಿ ವಂದಿಸಿದರು.