ಮಂಗಳೂರು: ದೇಶದ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ 100 ನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ವಿತ್ತೀಯ ವರ್ಷ 2023 ರ ಉಳಿತಾಯ ಹಾಗೂ ಚಾಲ್ತಿ ಖಾತೆಗಳ ಅಭಿಯಾನವನ್ನು 100 ದಿನಗಳ ಅವಧಿಗೆ ಪ್ರಾರಂಭಿಸಿದೆ.
ನವೆಂಬರ್ 15, 2022 ರಂದು ಪ್ರಾರಂಭವಾದ ಈ ಅಭಿಯಾನವು ಮಾರ್ಚ್ 24, 2023 ಕ್ಕೆ ಅಂತ್ಯಗೊಳ್ಳಲಿದೆ. ಈ ಅಭಿಯಾನದಲ್ಲಿ ಬ್ಯಾಂಕು ಸುಮಾರು 3.65 ಲಕ್ಷ ನೂತನ ಉಳಿತಾಯ ಹಾಗೂ ಚಾಲ್ತಿ ಖಾತೆಗಳನ್ನು ತೆರೆಯುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ದೇಶದಾದ್ಯಂತ ವ್ಯಾಪಿಸಿರುವ 883 ಶಾಖೆಗಳ ಸಿಬ್ಬಂದಿವರ್ಗ ಅಹರ್ನಿಶಿ ಶ್ರಮಿಸಿ ಅಭಿಯಾನವನ್ನು ಸಫಲಗೊಳಿಸುವಲ್ಲಿ ಕಟಿಬದ್ಧವಾಗಿ ನಿಂತಿದೆ. ಈ ಅಭಿಯಾನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದ ಕರ್ಣಾಟಕ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್ ಅವರು ಮಾತನಾಡಿ ದೇಶದಾದ್ಯಂತ ಜನರನ್ನು ವಿತ್ತೀಯ ಸೇರ್ಪಡೆಗೆ ಒಳಪಡಿಸುವ ಒಂದು ವಿಶೇಷ ಉಪಕ್ರಮದಲ್ಲಿ ಬ್ಯಾಂಕು ತನ್ನನ್ನು ತೊಡಗಿಸಿಕೊಂಡಿದೆ. ಈಗಾಗಲೇ 1.17 ಕೋಟಿ ಸಂತೃಪ್ತ ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಈವರ್ಷದ ಕಾಸಾ ಅಭಿಯಾನದ ಮೂಲಕ ಇನ್ನಷ್ಟುಹೊಸ ಗ್ರಾಹಕರನ್ನು ತನ್ನ ಸಮೂಹಕ್ಕೆಸೇರಿಸಿಕೊಳ್ಳಲಿದೆ. ಕರ್ಣಾಟಕ ಬ್ಯಾಂಕ್ ‘ತಂತ್ರಜ್ಞಾನ ಸಂಪನ್ನ ಬ್ಯಾಂಕ್’ ಎಂದೇ ಪ್ರಸಿದ್ಧವಾಗಿದ್ದು, ಇದಕ್ಕೆಮಾನವೀಯ ಸ್ಪರ್ಶದ ಮುಖಾಂತರ ‘ಗ್ರಾಹಕ ಸ್ನೇಹಿ ಡಿಜಿಟಲ್ಬ್ಯಾಂಕ್’ ಎಂಬ ಹೆಸರಿಗೂ ಪಾತ್ರವಾಗಿದೆ.
ಸಮಾಜದ ಆರ್ಥಿಕ ಅವಶ್ಯಕತೆಗಳಿಗೆ ಅನುಗುಣವಾದ ಎಲ್ಲಾ ರೀತಿಯ ಆರ್ಥಿಕಯೋಜನೆಗಳನ್ನು ಬ್ಯಾಂಕ್ ಒಳಗೊಂಡಿದೆ. ಈಅಭಿಯಾನದ ಮೂಲಕ ನಾವು ನವ ಪೀಳಿಗೆಯಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸಿ, ಡಿಜಿಟಲ್ ತಂತ್ರಜ್ಞಾನ ಸಂಪನ್ನ ಬ್ಯಾಂಕಿಂಗ್ ಸೇವೆಗಳನ್ನು ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಪರಿಚಯಿಸಿದ್ದೇವೆ. ಅಂತೆಯೇ ಈ ಕಾಸಾ ಅಭಿಯಾನದ ಮೂಲಕ ಬ್ಯಾಂಕ್ ತನ್ನ ಉಳಿತಾಯ ಹಾಗೂ ಚಾಲ್ತಿ ಖಾತೆಗಳ ಮೇಲೆ ಹೆಚ್ಚು ಗಮನಹರಿಸಿ, ಅದನ್ನು ಒಟ್ಟು ಠೇವಣಿಯ ಕನಿಷ್ಟ ಶೇ 35 ರ ಘಟ್ಟಕ್ಕೆ ತಲುಪಿಸುವ ಗುರಿಯನ್ನೂ ಹಾಕಿಕೊಂಡಿದೆ. ಸಾರ್ವಜನಿಕರು ಈ ಬಾರಿಯ ಕಾಸಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಮೌಲ್ಯವರ್ಧಿತ, ಸೇವೆಗಳನ್ನು ಪಡೆದು ಕರ್ಣಾಟಕ ಬ್ಯಾಂಕನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶುಭ ಹಾರೈಸಿದ ಬ್ಯಾಂಕಿನ ಚೇರ್ಮನ್ ಪಿ ಪ್ರದೀಪ್ ಕುಮಾರ್ ಅವರು ಬ್ಯಾಂಕಿನ ನಿರಂತರ ಹಾಗೂ ಸುದೃಢ ಅಭಿವೃದ್ಧಿಯಲ್ಲಿ ಕಾಸಾ ಠೇವಣಿಯು ಮಹತ್ವದ ಪಾತ್ರ ವಹಿಸುತ್ತವೆ. ಡಿಜಿಟಲ್ ಚಾನೆಲ್ಗಳ ಮೂಲಕ ನಾವು ನಮ್ಮ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸಲಿದ್ದೇವೆ. ಮುಂಬರುವ ದಿನಗಳಲ್ಲಿಬ್ಯಾಂಕು ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ ಎಂದು ನುಡಿದರು.
ಡಿಜಿಟಲ್ ತಂತ್ರಜ್ಞಾನವನ್ನು ನಿರಂತರ ಮೈಗೂಡಿಸಿಕೊಳ್ಳುತ್ತಿರುವ ಕರ್ಣಾಟಕ ಬ್ಯಾಂಕ್ ಹೊಸಯುಗದ ಪ್ರವರ್ತಕನೆನಿಸಿದೆ. ಈ ಅಭಿಯಾನದಲ್ಲಿ ಬ್ಯಾಂಕು ಅತ್ಯಂತ ಮೌಲ್ಯವರ್ಧಿತ ಗುಣಮಟ್ಟವುಳ್ಳ ಡಿಜಿಟಲ್ ತಂತ್ರಜ್ಞಾನ ಸಂಪನ್ನವಾದ ಉಳಿತಾಯ ಹಾಗೂ ಚಾಲ್ತಿ ಖಾತೆಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಲಿದೆ.
ಬ್ಯಾಂಕಿನ ‘ಕೆಬಿಎಲ್ ವಿಕಾಸ್’ ಎನ್ನುವ ಪರಿವರ್ತನಾ ಪ್ರಕ್ರಿಯೆಯ ಫಲಶ್ರುತಿಯಾಗಿ ಡಿಜಿಟಲ್ ವಹಿವಾಟುಗಳ ಮೂಲಕ ಗ್ರಾಹಕರಿಗೆ ಖಾತೆ ತೆರೆಯಲು ಇನ್ನಷ್ಟು ಅನುಕೂಲ ಮಾಡಿಕೊಡಲಿದೆ. ಟ್ಯಾಬ್, ವೆಬ್ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದ್ದು, ಈ ಸೌಲಭ್ಯದಿಂದ ಗ್ರಾಹಕರು ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಖಾತೆಯನ್ನು ತೆರೆಯಬಹುದಾಗಿದೆ. ಇದಲ್ಲದೆ ಬ್ಯಾಂಕು ತನ್ನ ಡಿಜಿಟಲ್ ಚಾನೆಲ್ಗಳ ಮೂಲಕ ಅನೇಕ
ಸೌಲಭ್ಯಗಳನ್ನು ಒದಗಿಸಿದೆ. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಜಸ್ಟಿಸ್ ಎ.ವಿ ಚಂದ್ರಶೇಖರ, ಡಾ. ಡಿ.ಎಸ್ ರವೀಂದ್ರನ್, ಕಲ್ಮಂಜೆ ಗುರುರಾಜ ಆಚಾರ್ಯ, ಚೀಫ್ ಬಿಸಿನೆಸ್ ಆಫೀಸರ್ ಗೋಕುಲ್ ದಾಸ್ ಪೈ ಮತ್ತು ಬ್ಯಾಂಕಿನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಾದೇಶಿಕ ಮುಖ್ಯಸ್ಥರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.