ಬಂಟ್ವಾಳ: ಅಮೃತ ನಿರ್ಮಲ ಯೋಜನೆಯಡಿ ಬಿ.ಸಿರೋಡಿನ ಆಡಳಿತ ಸೌಧದ ಮುಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಪಿಂಕ್ ಟ್ಲಾಯೆಟ್ ನಲ್ಲಿ ಕಳೆದರಾತ್ರಿ ವಾಮಾಚಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು,ಸ್ಥಳೀಯವಾಗಿ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.
ನಿರ್ಮಾಣ ಹಂತದಲ್ಲಿರುವ ಪಿಂಕ್ ಟ್ಲಾಯೆಟ್ ನ ಒಳಗೆ ಕುಂಬಳಕಾಯಿ,ಪ್ರಸಾದ,ಮೊಟ್ಟೆ,ಲಿಂಬೆಹಣ್ಣು, ಚೂರಿ ಹಾಗೂ ಕುಂಬಳಕಾಯಿ ಮೇಲೆ ಗೊಂಬೆಯೊಂದನ್ನು ನಿರ್ಮಿಸಿ ಪೂಜೆ ಮಾಡಿದ ಕುರುಹುಗಳು ಪತ್ತೆಯಾಗಿದೆ.ಸಾರ್ವಜನಿಕ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್ ಟ್ಲಾಯೆಟ್ ಕಾಮಗಾರಿ ನಡೆಯುತ್ತಿದ್ದು, ನಡೆಸಿರುವ ವಾಮಾಚಾರ ಇಲ್ಲಿಂದ ಸಾಗುವ ಎಲ್ಲರಿಗೂ ಕಾಣುತ್ತಿದೆ.
ಹಲವಾರು ವರ್ಷಗಳ ಇತಿಹಾಸ ವಿದ್ದ ಹಳೆಯ ಸಾರ್ವಜನಿಕ ರಂಗ ಮಂದಿರವನ್ನು ಹಾಗೂ ಅನೇಕ ಮರಗಳನ್ನು ಕೆಡವಿ ಹಾಕಿ ಸುಂದರ ಬಿಸಿರೋಡು ಕಲ್ಪನೆಗೆ ಸುಂದರವಾದ ರಸ್ತೆಯ ನಿರ್ಮಾಣ ಮಾಡಲಾಗಿತ್ತು. ಆದರೆ ಅದಾದ ಕೆಲವೇ ಸಮಯದಲ್ಲಿ ಸರಕಾರದ ಆದೇಶದಂತೆ ಪಿಂಕ್ ಟ್ಲಾಯೆಟ್ ನ್ನು ನಿರ್ಮಾಣ ಮಾಡಲು ಪುರಸಭೆ ಮುಂದಾಗಿತ್ತು. ಬಿಸಿರೋಡಿನ ಹೃದಯ ಭಾಗದಲ್ಲಿ ಆಡಳಿತ ಸೌಧದ ಕಚೇರಿಗೆ ಪ್ರವೇಶ ಮಾಡುವ ಗೇಟ್ ನ ಹತ್ತಿರದಲೇ ನಿರ್ಮಾಣ ಮಾಡುವ ತಯಾರಿಯೂ ನಡೆದಿತ್ತು.
ಈ ನಡುವೆ ಜಿಲ್ಲಾಧಿಕಾರಿಯವರಿಗೆ ದೂರು ಹೋದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಮೌಖಿಕ ಆದೇಶದ ಮೇರೆಗೆ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ ಇತ್ತೀಚೆಗಿನ ಬೆಳವಣಿಗೆಯಲ್ಲಿ ಪುರಸಭಾ ಆಡಳಿತ ಅಮೃತ ನಿರ್ಮಲ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ಪುರಸಭೆಯ ಪಿಂಕ್ ಶೌಚಗೃಹದ ಕಟ್ಟಡ ಕಾಮಗಾರಿ ಮುಂದುವರಿಸಲು ಹಸಿರು ನಿಶಾನೆ ತೋರಿಸಿತ್ತು.
ಅದರಂತೆ ಕಾಮಗಾರಿ ಮತ್ತೆ ವೇಗ ಪಡೆದುಕೊಳ್ಳುತ್ತಿರುವಂತೆಯೇ ವಾಮಾಚಾರ ನಡೆದಿರುವುದು ಸ್ಥಳೀಯವಾಗಿ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಮಾಹಿತಿ ಪಡೆದ ಬಂಟ್ವಾಳ ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.