ಮಂಗಳೂರು: ಕರ್ನಾಟಕ ಸರಕಾರದ ಕಂದಾಯ ಇಲಾಖೆ ಹಾಗೂ ಮಂಗಳೂರು ನಗರ ಉತ್ತರ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಇವರ ನೇತೃತ್ವದಲ್ಲಿ ಒಂದೇ ಸೂರಿನಡಿ ಸರಕಾರಿ ಸೇವಾ ಸೌಲಭ್ಯಗಳ ವಿತರಣೆ, ಮಾಹಿತಿ ಕುರಿತು ಸರಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜನಸ್ಪಂದನಾ ಕಾರ್ಯಕ್ರಮ ಬುಧವಾರ ಬಂಟರ ಭವನದಲ್ಲಿ ನಡೆಯಿತು.
ಉದ್ಘಾಟಿಸಿ ಮಾತನಾಡಿದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರು “ಕ್ಷೇತ್ರದ ಜನರಿಗಾಗಿ ಎಲ್ಲಾ ಸರಕಾರಿ ಇಲಾಖೆಗಳ ಸಹಯೋಗದಲ್ಲಿ ಜನಸ್ಪಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಂದೇ ಕಡೆ ಜನರಿಗೆ ಲಭ್ಯರಿರುವ ಕಾರಣ ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ. ಈಗಾಗಲೇ ಮಂಗಳೂರು ನಗರ ಉತ್ತರ ಕ್ಷೇತ್ರದ ವಿವಿಧ ಕಡೆಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿದ್ದು ಯಶಸ್ವಿಯಾಗಿದೆ.
ಪಕ್ಷ, ಜಾತಿ, ಧರ್ಮ ಯಾವುದೇ ಇರಲಿ. ಜನರು ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡಲ್ಲಿ ಆಯೋಜಕರ ಶ್ರಮ ಸಾರ್ಥಕವಾಗುತ್ತದೆ. ಸಾರ್ವಜನಿಕರು ಮತ್ತು ಮಾಧ್ಯಮಗಳು ಹೆಚ್ಚು ಪ್ರಚಾರ ಮಾಡುವ ಮೂಲಕ ಇನ್ನಷ್ಟು ಜನರು ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ” ಎಂದರು. ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಣೆ ನಡೆಯಿತು. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಸುರತ್ಕಲ್ ಪಶ್ಚಿಮ 1ನೇ ವಾರ್ಡ್, ಸುರತ್ಕಲ್ ಪೂರ್ವ 2ನೇ ವಾರ್ಡ್, ಕಾಟಿಪಳ್ಳ ಮೂರನೇ ವಾರ್ಡ್, ಕೃಷ್ಣಾಪುರ 4ನೇ ವಾರ್ಡ್, ಕೃಷ್ಣಾಪುರ 5ನೇ ವಾರ್ಡ್, ಮತ್ತು ಇಡ್ಯಾ ಪೂರ್ವ 6ನೇ ವಾರ್ಡ್ ಗಳ ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸೇವಾ ಸೌಲಭ್ಯ, ಕಾರ್ಮಿಕರಿಗೆ ಸಂಬಂಧಪಟ್ಟ ಕಾರ್ಡ್ಗಳ ಸೇವಾ ಸೌಲಭ್ಯ, ಆಹಾರ ಇಲಾಖೆ ಪಡಿತರ ಚೀಟಿಗೆ ಸಂಬಂಧಪಟ್ಟ ಸೌಲಭ್ಯ, ಮೀನುಗಾರಿಕೆಗೆ ಸಂಬಂಧಪಟ್ಟ ಸೌಲಭ್ಯ, ಕೃಷಿ ಇಲಾಖೆಗೆ ಸಂಬಂಧಪಟ್ಟ ಸೌಲಭ್ಯ, ತೋಟಗಾರಿಕಾ ಇಲಾಖೆ, ಲೀಡ್ಬ್ಯಾಂಕ್ ಸೌಲಭ್ಯ, ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ಸೌಲಭ್ಯ, ದೇವರಾಜ ಅರಸು ನಿಗಮದಲ್ಲಿ ಸಾಲ ಸೌಲಭ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಸುಕನ್ಯಾ ಸಮೃದ್ಧಿ ಯೋಜನೆ, ಪೋಷಣಾ ಅಭಿವೃದ್ಧಿ ಯೋಜನೆ, ಕಿರುಸಾಲ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗಳ ಬಗ್ಗೆ ಒಂದೇ ಸೂರಿನಡಿ ಪ್ರಯೋಜನ ಮತ್ತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮೇಯರ್ ಜಯಾನಂದ ಅಂಚನ್, ಕಾರ್ಪೋರೇಟರ್ ಗಳಾದ ಲೋಕೇಶ್ ಬೊಳ್ಳಾಜೆ, ಶ್ವೇತಾ ಪೂಜಾರಿ, ಶೋಭಾ ರಾಜೇಶ್, ಸರಿತಾ ಶಶಿಧರ್, ಲಕ್ಷ್ಮಿ ಶೇಖರ್ ದೇವಾಡಿಗ,ವೇದಾವತಿ, ನಯನ ಕೋಟ್ಯಾನ್, ಸುಮಿತ್ರಾ ಕರಿಯ, ನಾಮ ನಿರ್ದೇಶಿತ ಕಾರ್ಪೋರೇಟರ್ ಪ್ರಶಾಂತ್ ಮೂಡಾಯಿಕೋಡಿ, ಉಪತಹಸೀಲ್ದಾರ್ ನವೀನ್, ವಲಯ ಆಯುಕ್ತರು ವಾಣಿ ಆಳ್ವ,ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಮಹಾಶಕ್ತಿ ಕೇಂದ್ರದ ಪ್ರಮುಖರು, ಕಾರ್ಯಕರ್ತರು, ಉಪಸ್ಥಿತರಿದ್ದರು.