ಬೆಂಗಳೂರು: ಸಿಲಿಕಾನ್ ವ್ಯಾಲಿ ಎಂದೂ ಕರೆಯಲ್ಪಡುವ ರಾಜ್ಯ ರಾಜಧಾನಿಯಲ್ಲಿ ಗುಂಡಿಗಳ ಹಾವಳಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್, ಗುಂಡಿಗಳನ್ನು ತುಂಬಿಸುವುದು ನಾಗರಿಕ ಸಂಸ್ಥೆಯ ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂದು ಹೇಳಿದೆ.
ಬೆಂಗಳೂರಿನ ಗುಂಡಿಗಳ ಹಾವಳಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಲೆ ನೇತೃತ್ವದ ಪೀಠವು, ನಗರದಲ್ಲಿನ ಗುಂಡಿಗಳಿಂದ ತುಂಬಿದ ರಸ್ತೆಗಳನ್ನು ದುರಸ್ತಿಗೊಳಿಸಲು ಬಿಡುಗಡೆಯಾದ ಆದೇಶಗಳು ಕೇವಲ ಕಾಗದದ ಮೇಲೆ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
“ಕಳೆದ ಆರು ವರ್ಷಗಳಿಂದ ಬೆಂಗಳೂರಿನ ರಸ್ತೆಗಳು ಶೋಚನೀಯ ಸ್ಥಿತಿಯಲ್ಲಿವೆ. ನಿವಾಸಿಗಳು ನಿರಂತರವಾಗಿ ಕುಂದುಕೊರತೆಗಳನ್ನು ಎದುರಿಸುತ್ತಿದ್ದಾರೆ. ಗುಂಡಿಗಳು ಸಾವಿನ ಬಲೆಗಳಾಗಿ ಮಾರ್ಪಟ್ಟಿವೆ ಮತ್ತು ಅನೇಕ ಜೀವಗಳನ್ನು ಕಳೆದುಕೊಳ್ಳುತ್ತಿವೆ” ಎಂದು ಅದು ಹೇಳಿದೆ.
ಬಿಬಿಎಂಪಿಯಿಂದ ಮಾತ್ರ ಗುಂಡಿಗಳನ್ನು ತುಂಬಿಸಲು ಪ್ರಮಾಣಪತ್ರ ನೀಡುವ ಕ್ರಮವು ಸೂಕ್ತವಲ್ಲ ಎಂದು ನ್ಯಾಯಾಲಯವು ಒತ್ತಿಹೇಳಿತು. ಬಿಬಿಎಂಪಿಯು ಗುಂಡಿಗಳನ್ನು ತುಂಬುವ ಜವಾಬ್ದಾರಿಯನ್ನು ಹೊಂದಿದೆ, ಆದರೆ, ಅದು ತನ್ನ ಸ್ವಂತ ಕೆಲಸಗಳಿಗೆ ಈ ನಿಟ್ಟಿನಲ್ಲಿ ಗುಣಮಟ್ಟದ ಪ್ರಮಾಣಪತ್ರವನ್ನು ನೀಡಲು ಸಾಧ್ಯವಿಲ್ಲ, ಮುಂಬರುವ ದಿನಗಳಲ್ಲಿ, ಗುಣಮಟ್ಟ ಪ್ರಮಾಣೀಕರಣದ ಜವಾಬ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ನೀಡಲಾಗುವುದು ಎಂದು ಅದು ಹೇಳಿದೆ.
ರಸ್ತೆಗುಂಡಿಗಳನ್ನು ತುಂಬುವುದನ್ನು ಮೇಲ್ವಿಚಾರಣೆ ಮಾಡಲು ಮುಖ್ಯ ಎಂಜಿನಿಯರ್ ಅಥವಾ ಹಿರಿಯ ಎಂಜಿನಿಯರ್ ಅನ್ನು ನಿಯೋಜಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಬಿಬಿಎಂಪಿಯು ಒಂದು ವಾರದೊಳಗೆ ಯಥಾಸ್ಥಿತಿ ವರದಿಯನ್ನು ಎನ್ಎಚ್ಎಐಗೆ ಸಲ್ಲಿಸಬೇಕು ಮತ್ತು ಎನ್ಎಚ್ಎಐನಿಂದ ನಿಯೋಜಿಸಲ್ಪಟ್ಟ ಅಧಿಕಾರಿ ಪರಿಶೀಲನೆ ನಡೆಸಬೇಕು ಎಂದು ಅದು ಹೇಳಿದೆ.
ಈ ನಿಟ್ಟಿನಲ್ಲಿ ಬಿಬಿಎಂಪಿಯು ಎನ್ಎಚ್ಎಐಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಮತ್ತು ಪ್ರತಿಯಾಗಿ, ರಸ್ತೆಗಳ ಗುಣಮಟ್ಟದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.