ಮಂಗಳೂರು: ಜಿಲ್ಲೆಯ ಯುವಜನತೆ ಧರ್ಮ ರಕ್ಷಣೆಯ ಹೆಸರಲ್ಲಿ ಪರಸ್ಪರ ಒಡೆದಾಡಿ ಬೀದಿ ಹೆಣವಾಗಿ ಸಾಯುವುದಕ್ಕಿಂತ ಉದ್ಯೋಗದ ಹಕ್ಕಿಗಾಗಿ ಹೋರಾಡಬೇಕು, ಜನರ ನೈಜ ಬದುಕಿನ ಪ್ರಶ್ನೆಯ ಇತ್ಯರ್ಥಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದರಾಗಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ( 04-09-2022) ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನತೆಗೆ ದೊಡ್ಡ ಪಾಲು, ಉದ್ಯೋಗ ಸೃಷ್ಟಿಸಿ, ನಿರುದ್ಯೋಗದಿಂದ ರಕ್ಷಿಸಿ ಎಂಬ ಘೋಷಣೆಯಡಿಯಲ್ಲಿ ನಡೆದ ಡಿವೈಎಫ್ಐ ಕಣ್ಣೂರು ಘಟಕದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತೀ ವರುಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೆವೆಂದು ಚುನಾವಣಾ ಪೂರ್ವ ಭರವಸೆ ನೀಡಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಈವರೆಗೆ ಯಾವ ಉದ್ಯೋಗವನ್ನೂ ಸೃಷ್ಟಿಸದೆ ಈ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಈ ಹಿಂದೆ ಕಂಡು ಕೇಳರಿಯದಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ. ಮೊನ್ನೆ ಪ್ರಧಾನಿ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಹಲವು ಯೋಜನೆಗಳಿಗೆ ಚಾಲನೆ ನೀಡಿದರೂ ಅಂತಹ ಯೋಜನೆಗಳಲ್ಲಿ ಜಿಲ್ಲೆಯ ಯುವಜನತೆಗಾಗುವ ಯಾವ ಪ್ರಯೋಜನಗಳೂ ನಿರ್ಮಾಣಗೊಂಡಿಲ್ಲ. ಕೇವಲ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡಿ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಮೂಲಕ ಜನವಿರೋಧಿ ಆಡಳಿತವನ್ನು ನಡೆಸಲಾಗುತ್ತಿದ್ದೆ. ಮೋದಿ ಸರಕಾರದ ಆಡಳಿತ ನೀತಿಗಳ ಬಗ್ಗೆ, ಕೋಮು ರಾಜಕಾರಣದ ವಿರುಧ್ದ ಮೊಲಗುವ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ನಿರುದ್ಯೋಗ ಅನ್ನೋದು ಈಗ ದೇಶದ ಗಂಭೀರ ಸಮಸ್ಯೆಯಾಗಿದ್ದು ದೇಶದ ಯುವಜನತೆ ಉದ್ಯೋಗದ ಹಕ್ಕಿಗಾಗಿ ರಾಜಿರಹಿತ ಹೋರಾಟ ನಡೆಸಲು ಮುಂದಾಗಬೇಕಾಗಿದೆ.
ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಖಾದರ್ ಬೋರುಗುಡ್ಡೆ ವಹಿಸಿದ್ದರು. ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸಾಧಿಕ್ ಕಣ್ಣೂರು ಕಾರ್ಯದರ್ಶಿಯಾಗಿ ಹಾರೀಸ್ ಕುಂಡಾಲ ಮತ್ತು ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.