ಮಂಗಳೂರು, ಸೆ.6: ಪ್ರಧಾನಿ ಮೋದಿಯವರು ಮೋದಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುತ್ತಾರೆ ಎಂಬ ಆಸೆ ಜನರಲ್ಲಿತ್ತು, ಆದರೆ ಮೋದಿ ಏನೂ ಘೋಷಣೆ ಮಾಡಿಲ್ಲ, ಇದರಿಂದ ಜನರಿಗೆ ಭಾರೀ ನಿರಾಸೆಯಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಎಲ್ಲರ ಬಗ್ಗೆ ವೈಯಕ್ತಿಕವಾಗಿ ಟೀಕೆ, ಆರೋಪ ಮಾಡುವ ನಳಿನ್ ಕುಮಾರ್ ಬಿಟ್ ಕಾಯಿನ್ ವಿಷಯವೆತ್ತಿದರೆ ಮೌನವಾಗುತ್ತಾರೆ. ಈ ಬಗ್ಗೆ ಪಾರದರ್ಶಕ ತನಿಖೆಯಾಗಲಿ ಎಂದವರು ಹೇಳಿದರು. ಪಿ ಎಸ್ ಐ ನೇಮಕಾತಿ ಹಗರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಲಿ ಎಂದು ಆಗ್ರಹಿಸಿದರು.
ದ.ಕ. ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬಗ್ಗೆ ಇಲ್ಲಿಯ ಯುವಕರು ಸೇರಿದಂತೆ ಜನರಿಗೆ ಬಹಳಷ್ಟು ನಿರೀಕ್ಷೆ ಇತ್ತು. ಆದರೆ ಅದೆಲ್ಲವೂ ಹುಸಿಯಾಗಿದ್ದು, ಡಬಲ್ ಇಂಜಿನ್ ಸರಕಾರದಿಂದ ಡಬಲ್ ಧೋಖಾ ಎಂಬುದು ಅವರಿಗೆ ಅರಿವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕರಾವಳಿ ಭಾಗದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಇಲ್ಲಿ ಬಹಳ ಪವರ್ ಫುಲ್ ಅಂತ ಭಾವಿಸಿದ್ದೆ. ಆದರೆ ಅವರ ಮಾತಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ.
ಪ್ರಧಾನಿ ಮೋದಿ ಭೇಟಿ ನೀಡಿದಾಗ ಅವರ ಎದರುಲ್ಲೇ ಮುಖ್ಯಮಂತ್ರಿಯವರು ನಾರಾಯಣಗುರು ಪೀಠ ಹಾಗೂ ನಾರಾಯಣ ಗುರು ನಿಗಮ ಸ್ಥಾಪನೆಯ ಘೋಷಣೆ ಮಾಡುವ ಬಗ್ಗೆ ಹಲವರು ನಿರೀಕ್ಷೆ ಇರಿಸಿದ್ದರು. ಆದರೆ ಅದೂ ಆಗಿಲ್ಲ. ಈ ಬಗ್ಗೆ ನನಗೆ ಅಚ್ಚರಿಯಾಗಿಲ್ಲ. ಯಾಕೆಂದರೆ ಈ ಸರಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋದಿಂದ ಹಿಡಿದು ಪದೇ ಪದೇ ಅವಮಾನ ಮಾಡಿದೆ. ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ ನಾರಾಯಣಗುರುಗಳ ವಿಷಯವನ್ನೇ ಕೈ ಬಿಟ್ಟಿದ್ದರು. ಆವಾಗಲೂ ಯಾವುದೇ ಬಿಜೆಪಿ ನಾಯಕ ಧ್ವನಿ ಎತ್ತಿಲ್ಲ. ಸಮುದಾಯದ ಜನರು ತಿರುಗಿ ಬಿದ್ದಾಗ ಒಂದೂವರೆ ತಿಂಗಳ ಬಳಿಕ ಸಚಿವ ಸನಿಲ್ ಕುಮಾರ್ ಪತ್ರ ಬರೆಯುತ್ತಾರೆ. ನಾರಾಯಣ ಗುರುಗಳ ಹೆಸರಿನಲ್ಲಿ ಮತ ಪಡೆಯುವವರು, ಅನ್ಯಾಯ ಆದಾಗ ಬಿಜೆಪಿ ಎಂಎಲ್ಎ ಬಾಯಿಗೆ ಯಾಕೆ ಬೀಗ ಬೀಳುತ್ತದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಬಿಜೆಪಿಯವರದ್ದು ಕೇವಲ ಧರ್ಮ ರಾಜಕೀಯ. ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಅಂದ್ರೆ ಹಲಾಲ್, ಜಟ್ಕಾ ಬಗ್ಗೆ ಮಾತನಾಡುತ್ತಾರೆ. ಅಭಿವೃದ್ಧಿಗೆ ಹಣ ನೀಡಿ ಎಂದರೆ ಕಾಶ್ಮೀರ್ ಫೈಲ್ ನೋಡಿದ್ರಾ ಅಂತಾ ಕೇಳುತ್ತಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತನಾಡಿ ಎಂದರೆ, ಟಿಪ್ಪುಸುಲ್ತಾನ್ ವಿಚಾರ ಪ್ರಸ್ತಾಪಿಸುತ್ತಾರೆ. ನಿರುದ್ಯೋಗ ಬಗ್ಗೆ ಮಾತನಾಡಿ ಅಂದರೆ ಯುವಕರಿಗೆ ಕೇಸರಿ ಶಾಲು ಹಾಕಿ ಧರ್ಮ ರಕ್ಷಣೆ, ಗೋರಕ್ಷಣೆಗೆ ಕಳುಹಿಸುತ್ತಾರೆ. ಅಕ್ಕಿ, ಮೊಸರು, ಗೋಧಿ ಮೊದಲಾದ ಆಹಾರ ಪದಾರ್ಥಗಳ ಮೇಲೆ ಜಿಎಸ್ಟಿ ಯಾಕೆ ಹಾಕಿದ್ದೀರಿ ಎಂದು ಪ್ರಶ್ನಿಸಿದರೆ, ಅಝಾನ್ ನಿಷೇಧಿಸಬೇಕು ನಿಮ್ಮ ಅಭಿಪ್ರಾಯ ಏನು ಎಂದು ಕೇಳುತ್ತಾರೆ. ಬಿಜೆಪಿ ಶಾಸಕರು, ಬಿಜೆಪಿ ಸಚಿವರೇ ಭ್ರಷ್ಟಾಚಾರದ ಬ್ರೋಕರ್ಗಳಾಗಿದ್ದಾರೆ.
ಬಿಜೆಪಿಯವರ ಮಕ್ಕಳು ವಿದೇಶದಲ್ಲಿ ಉದ್ಯೋಗ, ವಿದ್ಯಾರ್ಜನೆ ಮಾಡುತ್ತಾರೆ, ಸಂಸ್ಥೆಗಳನ್ನು ಕಟ್ಟುತ್ತಾರೆ. ಆದರೆ ಹಿಂದುಳಿದ, ದಲಿತರ ಮಕ್ಕಳಿಗೆ ಕೇಸರಿ ಶಾಲು, ಗೋರಕ್ಷಣೆ, ಧರ್ಮ ರಕ್ಷಣೆಯ ಕೆಲಸ. ಬಿಜೆಪಿಯವರ ಎಷ್ಟು ನಾಯಕರ ಮಕ್ಕಳು ಗೋಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗೋಶಾಲೆಗಳಲ್ಲಿ ಪೋಷಣೆ ಯೋಜನೆಯಡಿ ಎಷ್ಟು ಮಂದಿ ದತ್ತು ಕಾರ್ಯ ನಡೆಸುತ್ತಿದ್ದಾರೆ ಎಂಬುದನ್ನು ಬಿಜೆಪಿಯವರು ತೋರಿಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ರಾಜ್ಯದಲ್ಲಿ ಬಿಜೆಪಿಯವರು ಯುಪಿ ಮಾದರಿ ತರುತ್ತಾರಂತೆ. ರಾಜ್ಯದ ಎಷ್ಟು ಮಂದಿ ಯುಪಿಯಲ್ಲಿ ದುಡಿಯುತ್ತಾರೆ. ಜನ ಉದ್ಯೋಗ ಹುಡುಕಿಕೊಂಡು ಕರ್ನಾಟಕಕ್ಕೆ ಬರುತ್ತಾರೆ. ಇಲ್ಲಿಂದ ಜನರು ಯುಪಿ ಅಥವಾ ಬಿಹಾರದಲ್ಲಿ ಉದ್ಯೋಗ ಹುಡುಕಿ ಹೋಗುತ್ತಿಲ್ಲ. ಯುಪಿಯ ವಾರಾಣಾಸಿ ಹಾಗೂ ಇತರ ಘಾಟಿಗಳಲ್ಲಿ ಲೇಸರ್ ಶೋ ನಡೆಸುತ್ತಿರುವುದು ಕನ್ನಡಿಗರು ಕಟ್ಟುತ್ತಿರುವ ದುಡ್ಡಿನಿಂದ ಕುವೆಂಪುವರ ಶಾಂತಿಯ ತೋಟ ನಮ್ಮ ರಾಜ್ಯ. ನಾರಾಯಣಗುರು, ಬಸವಣ್ಣರವರ ನಾಡಿದು. ಯುವಕರು ಬಿಜೆಪಿಯವರ ಈ ಕೋಮು ಸಂಘರ್ಷದ ಬಲೆಗೆ ಬೀಳಬಾರದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿ. ರಮಾನಾಥ ರೈ, ಹರೀಶ್ ಕುಮಾರ್, ಮಧು ಬಂಗಾರಪ್ಪ, ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಎ.ಸಿ. ವಿನಯ ರಾಜ್, ಕೆ.ಕೆ. ಶಾಹುಲ್ ಹಮೀದ್, ಬಿ.ಎ. ಮೊಯ್ದಿನ್ ಬಾವ, ಜೆ.ಆರ್. ಲೋಪೋ, ಶಾಲೆಟ್ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.