ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಇದರ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆವರಣದಲ್ಲಿ ಬಯಲು ರಂಗ ಮಂದಿರ ನಿರ್ಮಾಣಕ್ಕೆ ರೂ.25 ಲಕ್ಷ ಹಾಗೂ ಇತರ ವೆಚ್ಚಗಳಿಗೆ ರೂ.6 ಲಕ್ಷ ಅನುದಾನ ಬಿಡುಗಡೆಗೊಂಡು ಇದೀಗ ಕಾಮಗಾರಿಯು ಪೂರ್ಣಗೊಂಡಿರುತ್ತದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆವರಣದಲ್ಲಿ ಅ.14ರಂದು ಬೆಳಿಗ್ಗೆ 10. ಗಂಟೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಬಯಲು ರಂಗ ಮಂದಿರ ಲೋಕಾರ್ಪಣೆ ಗೊಳ್ಳಲಿದೆ.
ಬೆಳಿಗ್ಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಕಾರ್ಯಕ್ರಮಕ್ಕೆ ಅಭಿನಂದನಾ ನುಡಿಯನ್ನು ನುಡಿಯಲಿದ್ದಾರೆ.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಜಯಾನಂದ ಅಂಚನ್ ರವರು ಅಕಾಡೆಮಿ ಪ್ರಕಟಿತ ಪುಸ್ತಕ “ಸೀಕ್ ಸಂಕಡ ಇಲ್ಲ ಪಾತೆರ ಬೈದೆರೆನ ಕೆಬಿ ಪಾತೆರ” ಮತ್ತು ಮದೆಪ್ಪೆರಾವಂದಿ ತುಳುವೆರ್ ಮಾಲಿಕೆಯ ಪುಸ್ತಕ “ಆಟದಾರ್ ಪುಳಿಂಚೆದಾರ್ ರಾಮಯ್ಯ ಶೆಟ್ರ್” ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಸಾಹಿತಿ ಹಾಗೂ ಸಂಶೋಧಕರಾದ ಡಾ. ಸದಾನಂದ ಪೆರ್ಲ ರವರಿಗೆ ಸನ್ಮಾನ ನೆರವೇರಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಎಂ.ಸಿ.ಎಫ್ ಪ್ರಾಯೋಜಕತ್ವದ ದಾಖಲೀಕರಣ ಯೋಜನೆಯನ್ನು ಅನುಷ್ಠಾನಗೊಳಿಸಿದ ನಮ್ಮ ಕುಡ್ಲ ಚಾನೆಲ್, ನಮ್ಮ ಟಿ.ವಿ ಚಾನೆಲ್, ವಿ4 ಚಾನೆಲ್, ಚಾನೆಲ್ 9 ಮತ್ತು ದೈಜಿ ವರ್ಲ್ಡ್ ಚಾನೆಲ್ಗಳ ಮುಖ್ಯಸ್ಥರಿಗೆ ಸನ್ಮಾನ ನಡೆಯಲಿದೆ.
ಮಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ಪೂರ್ಣಿಮಾ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ ಗಣೇಶ್ ಕುಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್ಸಾರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ತುಳು ಭಾಷಾಭಿಮಾನಿಗಳು, ಸಾರ್ವಜನಿಕರು ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕವಿತ ಹಾಗೂ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ’ಸೋಜ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.