ಮಂಗಳೂರು: ತಿನ್ನುವ ಅಕ್ಕಿಯ ಮೇಲೆ, ಮಕ್ಕಳ ಪೆನ್ಸಿಲ್ ಮೇಲೆ ಜಿಎಸ್ಟಿ ಹಾಕುವ ಮೂಲಕ ಬಿಜೆಪಿ ಸರಕಾರ ಜನರನ್ನು ಲೂಟಿ ಮಾಡಿ ಖಜಾನೆ ತುಂಬಿಸುವ ಯತ್ನ ನಡೆಸುತ್ತಿದೆ. ಸರಕಾರ ನಡೆಸಲು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದನ್ನೇ ರಾಹುಲ್ ಗಾಂಧಿ ಆವತ್ತು ಗಬ್ಬರ್ ಸಿಂಗ್ ಟ್ಯಾಕ್ಸ್ ಅಂತ ಹೇಳಿದ್ದು ಎಂದು ಶಾಸಕ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅದನ್ನು ನಿಭಾಯಿಸುವ ಸಾಮರ್ಥ್ಯ ಇಲ್ಲದ ಬಿಜೆಪಿ ಸರಕಾರ ಜನರ ಮೇಲೆ ಜಿಎಸ್ಟಿ ರೂಪದಲ್ಲಿ ಹೊರೆ ಹಾಕುತ್ತಿದೆ. ಸರಕಾರ ಏನು ಮಾಡುತ್ತಿದೆ ಎಂದು ಜನರಿಗೆ ಅರ್ಥವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜಿಎಸ್ಟಿ ಜಾರಿಗೆ ತರುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಟೀಕಿಸಿದ್ದರು. ಆವಾಗ ಅವರನ್ನೇ ಅಪಹಾಸ್ಯ ಮಾಡಲಾಯಿತು. ಇದೀಗ ಜನರ ಮೇಲೆ ತೆರಿಗೆ ಹೊರೆ ಹಾಕುವ ಸರಕಾರ ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡಿದ್ದರ ಹಿಂದಿನ ಲಾಜಿಕ್ ಏನೆಂದು ಅರ್ಥವಾಗುತ್ತಿಲ್ಲ. ಜಿಎಸ್ಟಿ ಉತ್ತಮ ನೀತಿಯಾಗಿದ್ದರೂ ಬಿಜೆಪಿ ಅದನ್ನು ಅತ್ಯಂತ ಕೆಟ್ಟದಾಗಿ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದರು.
ಸೋನಿಯಾ ಗಾಂಧಿ ವಿರುದ್ಧದ ಇಡಿ ನೋಟೀಸು ಕುರಿತಂತೆ ರಾಜ್ಯ ಮಟ್ಟದಲ್ಲಿ ಜು. 21ರಂದು ಮತ್ತು ಜಿಲ್ಲಾ ಮಟ್ಟದಲ್ಲಿ ಜು. 25ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ತನ್ನ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದ ನಾಯಕಿಯೊಬ್ಬರ ಮೇಲೆ ಯಾವುದೇ ಕಾರಣವಿಲ್ಲದೆ ಇಡಿ ನೋಟೀಸು ನೀಡುತ್ತಿರುವುದು ರಾಜಕೀಯ ದ್ವೇಷ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಭಯಚಂದ್ರ ಜೈನ್, ಐವನ್ ಡಿಸೋಜಾ, ಶಕುಂತಳಾ ಶೆಟ್ಟಿ, ಮಿಥುನ ರೈ, ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಟಿ.ಕೆ. ಸುಧೀರ್, ಸುಭಾಷ್, ಪದ್ಮನಾಭ ನರಿಂಗಾನ, ಮೋನಪ್ಪ ಪೂಜಾರಿ, ಪದ್ಮನಾಭ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.