ಮಂಗಳೂರು: ವಿಧಾನಸಭೆ ಚುನಾವಣೆಗೆ ಪುತ್ತೂರು ಬಿಜೆಪಿಯಲ್ಲಿ ಟಿಕೆಟ್ ಘೋಷಣೆಯಾದ ಬಳಿಕ ಬಂಡಾಯ ಚಟುವಟಿಕೆ ಬಿರುಸು ಪಡೆದಿದೆ. ಅದರಲ್ಲಿಯೂ ಅರುಣ್ ಕುಮಾರ್ ಪುತ್ತಿಲ ಅವರ ಸಭೆ ಬಳಿಕ ಕಾರ್ಯಕರ್ತರ ವಲಯದಲ್ಲಿ ಅಸಮಾಧಾನ ಹೆಚ್ಚಿದೆ.
ಆರ್ಎಸ್ಎಸ್ ಮುಖಂಡರು ಮೌನಕ್ಕೆ ಶರಣಾಗಿರುವ ಬಿಜೆಪಿ ಮುಖಂಡರನ್ನು ಸಮಾಧಾನ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಈ ಕೆಲಸ ಯಾವುದೇ ಫಲ ನೀಡಿದಂತಿಲ್ಲ. ಬಿಜೆಪಿ ಮುಖಂಡರು ಪ್ರತಿ ಬೂತ್ಗಳಿಗೆ ತೆರಳಿ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಕೋರಿಕೊಳ್ಳುತ್ತಿದ್ದಾರೆ. ಇತ್ತ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಸಂತೋಷ್ ಭೇಟಿ ಸಿಹಿ ತರುವುದೇ: ಬಿಜೆಪಿ ಮತ್ತು ಹಿಂದುತ್ವ ಸಂಘಟನೆಗಳ ಪ್ರಯೋಗಶಾಲೆಯಂತಿರುವ ಪುತ್ತೂರಿನಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಏ.20ರ ಮೊದಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬರುವ ನಿರೀಕ್ಷೆಯಿದೆ. ಅಲ್ಲದೆ ಪುತ್ತಿಲ ಫಾರ್ ಪುತ್ತೂರು ಅಭಿಯಾನ ಮುಖ್ಯಸ್ಥರನ್ನು ಭೇಟಿಯಾಗುವ ನಿರೀಕ್ಷೆಯಿದೆ.