ಮಂಗಳೂರು: ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ 153ನೇ ಗಾಂಧಿ ಜಯಂತಿಯನ್ನು ಭಾನುವಾರ ಕಾಲೇಜು ಆವರಣದಲ್ಲಿ ಆಚರಿಸಲಾಯಿತು.
ಮುಖ್ಯ ಭಾಷಣಕಾರ, ಸ್ನಾತಕೋತ್ತರ ಕೊಂಕಣಿ ಸಂಯೋಜಕ, ಡಾ.ದೇವದಾಸ್ ಪೈ, ಮಹಾತ್ಮ ಗಾಂಧೀಜಿಯವರ ಜೀವನ ಚರಿತ್ರೆ ಮತ್ತು ಅವರ ತತ್ವಗಳ ವಿವರಣೆ ನೀಡಿದರು. ಸತ್ಯತೆ, ಪರಿಶುದ್ಧತೆ, ಮಾನವೀಯತೆ, ಸಮಾನತೆ, ಸರಳತೆ, ಮತ್ತು ಶಿಸ್ತಿನ ಮಾರ್ಗಗಳನ್ನು ಅನುಸರಿಸಲು ಅವರು ಕರೆ ನೀಡಿದರು.
ಎಂಕಾಂ, ಎಂಬಿಎ (ಐಬಿ) ಸಂಯೋಜಕ ಡಾ.ಜಗದೀಶ ಬಿ ಮಾತನಾಡಿ, ಪ್ರೀತಿ ಇರುವಲ್ಲಿ ಜೀವನವಿದೆ. ಪ್ರೀತಿ ಇಲ್ಲದಿದ್ದಾಗ ಜೀವನ ಅಸ್ತವ್ಯಸ್ತವಾಗುತ್ತದೆ. ಗಾಂಧೀಜಿಯವರಂತೆ ನಮ್ಮ ಮಾತು, ಆಲೋಚನೆ ಮತ್ತು ಕಾರ್ಯಗಳು ಶುದ್ಧವಾಗಿದ್ದರೆ ಇಡೀ ಮಾನವಕುಲ ಸಂತೋಷವಾಗಿರಬಹುದು ಎಂದು ತೋರಿಸಿಕೊಟ್ಟಿದ್ದಾರೆ, ಎಂದರು.
ಜಿಎಸ್ಟಿ ವಿಭಾಗದ ಸಂಯೋಜಕ ಡಾ.ಯತೀಶ್ ಕುಮಾರ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಮಾನವೀಯತೆಗೆ ಕಲಿಸಿದ ತತ್ವಗಳ ಬಗ್ಗೆ ಹೇಳುತ್ತಾ, ಇತರರ ತಪ್ಪುಗಳನ್ನು ಕ್ಷಮಿಸುವ ಹೃದಯವಂತಿಕೆ ನಮ್ಮಲ್ಲಿರಬೇಕು, ಎಂದು ಎಚ್ಚರಿಕೆ ನೀಡಿದರು.
ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸತ್ಯವನ್ನು ಒಪ್ಪಿಕೊಳ್ಳುವುದು ಕಷ್ಟ, ಆದರೆ ಗಾಂಧೀಜಿ ಅದನ್ನು ಸುಲಭವಾಗಿ ಸಾಧಿಸಿದ್ದರು. ಪ್ರತಿ ಕಣ್ಣಿನಿಂದಲೂ ಕಣ್ಣೀರು ಒರೆಸಲು ಯಶಸ್ವಿಯಾದುದರಿಂದ ಅವರು ಇಡೀ ಜಗತ್ತಿನಾದ್ಯಂತ ಮಹಾತ್ಮರಾಗಲು ಸಾಧ್ಯವಾಯಿತು, ಎಂದು ತಿಳಿಸಿದರು.
ವಾಣಿಜ್ಯ ವಿಭಾಗದ ಉಪನ್ಯಾಸಕ ವೆಂಕಟೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಡಾ.ರತಿ ಪ್ರಾರ್ಥನೆಗೈದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.