ಮಂಗಳೂರು: 2022ರ ನವೆಂಬರ್ನಲ್ಲಿ ಮಂಗಳೂರಿನ ಆಟೋದಲ್ಲಿ ಕುಕ್ಕರ್ ಸ್ಫೋಟಗೊಂಡಿತ್ತು. ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್ ಸ್ಫೋಟಗೊಳ್ಳುತ್ತಿದ್ದಂತೆ, ಕುಕ್ಕರ್ ಬಾಂಬ್ ಹಿಡಿದುಕೊಂಡಿದ್ದ ಶಿವಮೊಗ್ಗ ಮೂಲದ ಮೊಹಮ್ಮದ್ ಶಾರೀಖ್ ಹಾಗೂ ಆಟೋ ಡ್ರೈವರ್ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ, ಘಟನಾ ಸ್ಥಳಕ್ಕೆ ಭದ್ರತಾ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಆಗ ಪ್ರೆಶರ್ ಕುಕ್ಕರ್ ಒಳಗೆ ಡಿಟೋನೇಟರ್, ವೈರ್ ಹಾಗೂ ಬ್ಯಾಟರಿಗಳನ್ನು ಅಳವಡಿಸಿರೋದು ಪತ್ತೆಯಾಗಿತ್ತು.
ಇದೀಗ ಎನ್ಐಎ ಅಧಿಕಾರಿಗಳು ನಡೆಸಿದ ವಿಚಾರಣೆ ವೇಳೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಆಕಸ್ಮಿಕವಾಗಿ ಸಂಭವಿಸಿಲ್ಲ, ಉಗ್ರರ ಕೃತ್ಯ ಎಂದು ತಿಳಿದುಬಂದಿದೆ.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಕಿಂಗ್ ಪಿನ್ ಮೊಹ್ಮದ್ ಶಾರಿಕ್ ಅಲ್ಲ, ಬದಲಾಗಿ ಬೆಳಗಾವಿಯ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರ ಅಫ್ಸರ್ ಪಾಷಾ. ಬೆಳಗಾವಿ ಜೈಲಿನಲ್ಲಿದ್ದ ಉಗ್ರ ಅಫ್ಸರ್ ಪಾಷಾ ಮಂಗಳೂರು ಕುಕ್ಕರ್ ಸ್ಫೋಟದ ಮಾಸ್ಟರ್ ಮೈಂಡ್ ಎಂದು ಎನ್ ಐಎ ತನಿಖಾಧಿಕಾರಿಗಳು ತಿಳಿದುಕೊಂಡಿದ್ದಾರೆ. ಪರಿಚಯದ ವೇಳೆ ಇಬ್ಬರು ಪರಸ್ಪರ ಸ್ನೇಹಿತರಾಗಿ, ಉಗ್ರ ಚಟುವಟಿಕೆಗಳ ಬಗ್ಗೆ ಪ್ಲಾನ್ ಮಾಡಿದ್ದರಂತೆ.
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ವಿಚಾರಣೆಯನ್ನು ಎನ್ಐಎ ಅಧಿಕಾರಿಗಳು ನಡೆಸುತ್ತಿದ್ದರು. ಬೆಳಗಾವಿ ಹಿಂಡಲಗಾ ಜೈಲಿನಿಂದ ಜಯೇಶ್ ಪೂಜಾರಿ ಎಂಬಾತ ಮಹಾರಾಷ್ಟ್ರ ಪೊಲೀಸರಿಗೆ ಕರೆ ಮಾಡಿ ಗಡ್ಕರಿ ಬೆದರಿಕೆ ಹಾಕಿದ್ದ. ಈ ವಿಚಾರಣೆಯ ಸಂದರ್ಭದಲ್ಲಿ ಆನೇಕ ವಿಚಾರಗಳ ನಡುವೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಟೋಟಗೊಳಿಸಿರುವ ಮಾಹಿತಿ ಕೂಡಾ ಬೆಳಕಿಗೆ ಬಂದಿದೆ.