ಮಂಗಳೂರು: ಕರ್ನಾಟಕ ಬ್ಯಾಂಕಿನ ಅರ್ಧ ವಾರ್ಷಿಕ ನಿವ್ವಳ ಲಾಭವು ಸೆಪ್ಟೆಂಬರ್ 2023ರ ಅಂತ್ಯಕ್ಕೆ ಶೇ. 33.31 ದರದಲ್ಲಿ ವೃದ್ಧಿ ಕಂಡಿದ್ದು, ಸಾರ್ವಕಾಲಿಕ ದಾಖಲೆಯ ರೂ. 700.96 ಕೋಟಿಗೆ ಏರಿದೆ. ಇದು ಹಿಂದಣ ವರ್ಷದ ಇದೇ ಅವಧಿಯಲ್ಲಿ (ಸೆಪ್ಟೆಂಬರ್2022) ರೂ. 525.81 ಕೋಟಿಗಳಾಗಿತ್ತು.
ಇಂದು ಮಂಗಳೂರಿನಲ್ಲಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಪ್ರಸಕ್ತ ವರ್ಷದ ದ್ವಿತೀಯ ತ್ರೈಮಾಸಿಕದ ಹಾಗೂ ಪ್ರಥಮ ಅರ್ಧ ವಾರ್ಷಿಕದ (30-09-2023) ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು. ಪ್ರಸಕ್ತ ತ್ರೈಮಾಸಿಕದಲ್ಲಿ (ಸೆಪ್ಟೆಂಬರ್2023) ರೂ. 330.26 ಕೋಟಿ ನಿವ್ವಳ ಲಾಭವಾಗಿದೆ.
ಬ್ಯಾಂಕಿನ ನಿವ್ವಳ ಬಡ್ಡಿಆದಾಯವು (NII) ಸೆಪ್ಟೆಂಬರ್ 2023 ರ ತ್ರೈಮಾಸಿಕ ಅಂತ್ಯಕ್ಕೆ ಶೇ. 2.45 ರ ದರದಲ್ಲಿ ಹೆಚ್ಚಳಗೊಂಡು ರೂ. 822.41 ಕೋಟಿಗಳಿಗೆ ತಲುಪಿದ್ದು, ಇದು ಹಿಂದಣ ವರ್ಷದ ಇದೇ ಅವಧಿಯಲ್ಲಿ ರೂ. 802.73 ಕೋಟಿಗಳಾಗಿತ್ತು.
ಬ್ಯಾಂಕಿನ ಅನುತ್ಪಾದಕ ಸ್ವತ್ತುಗಳು ಗಮನಾರ್ಹ ರೀತಿಯಲ್ಲಿ ಇಳಿಕೆ ಕಂಡಿವೆ. ಬ್ಯಾಂಕಿನ ಒಟ್ಟು ಅನುತ್ಪಾದಕ ಸ್ವತ್ತುಗಳು (GNPA) ಶೇ 3.47 ಕ್ಕೆ ಇಳಿಕೆಯಾಗಿದ್ದು, ಅವು ಈ ಹಿಂದಿನ ತ್ರೈಮಾಸಿಕದಲ್ಲಿ ಅಂದರೆ ಜೂನ್ 2023ರ ವೇಳೆಗೆ ಶೇ 3.68 ಆಗಿದ್ದವು. ಅಂತೆಯೇ ನಿವ್ವಳ ಅನುತ್ಪಾದಕ ಸ್ವತ್ತುಗಳು (NNPA) ಶೇ 1.36 ಕ್ಕೆ ಇಳಿಕೆಯಾಗಿದ್ದು, ಅವು ಈ ಮುಂಚೆ (30.06.2023) ಶೇ 1.43 ಆಗಿದ್ದವು. ಹಿಂದಣ ವರ್ಷದ ಇದೇ ಅವಧಿಯಲ್ಲಿ (30.09.2022) ಒಟ್ಟು ಅನುತ್ಪಾದಕ ಸ್ವತ್ತುಗಳು (GNPA) ಶೇ 3.36 ಹಾಗೂ ನಿವ್ವಳ ಅನುತ್ಪಾದಕ ಸ್ವತ್ತುಗಳು (NNPA) ಶೇ 1.72 ಆಗಿದ್ದವು.
ಬ್ಯಾಂಕಿನ ಒಟ್ಟು ವ್ಯವಹಾರವು 30.09.2023 ರ ಅಂತ್ಯಕ್ಕೆ ರೂ. 1,56,467.71 ಕೋಟಿಗಳನ್ನು ತಲುಪಿದೆ. ಬ್ಯಾಂಕಿನ ಠೇವಣಿಗಳ ಮೊತ್ತವು ರೂ. 81,633.66 (30.09.2022) ಕೋಟಿಗಳಿಂದ ರೂ. 89,531.73 ಕೋಟಿಗಳಿಗೆ ಹಾಗೂ ಮುಂಗಡಗಳು ರೂ. 60,991.24 ಕೋಟಿಗಳಿಂದ ರೂ. 66,935.98 ಕೋಟಿಗಳಿಗೆ ತಲುಪಿದೆ. ಬ್ಯಾಂಕಿನ ಮುಂಗಡ ಮತ್ತು ಠೇವಣಿಗಳ ಅನುಪಾತ ಶೇ. 73.65 ರಷ್ಟಿದೆ.
ಕಳೆದ ವರ್ಷದ ದ್ವಿತೀಯ ತ್ರೈಮಾಸಿಕ ಅಂತ್ಯಕ್ಕೆ ಶೇ 15.28 ರಷ್ಟಿದ್ದ ಬಂಡವಾಳ ಪರ್ಯಾಪ್ತತಾ ಅನುಪಾತವು (ಕ್ಯಾಪಿಟಲ್ ಅಡೆಕ್ವೆಸಿ ರೇಶ್ಯೋ) ಈ ತ್ರೈಮಾಸಿಕ ಅಂತ್ಯಕ್ಕೆ ಇನ್ನೂ ಉತ್ತಮಗೊಂಡು ಶೇ 16.20 ರಷ್ಟಾಗಿದೆ. ಆದ್ಯತೆಯ ಆಧಾರದ ಮೇಲೆ ಒಟ್ಟು ರೂ. 800 ಕೋಟಿವರೆಗಿನ ಷೇರುಗಳನ್ನು ಅಕ್ಟೋಬರ್ ತಿಂಗಳಿನಲ್ಲಿ ವಿತರಿಸಲಾಗಿದೆ; ಇದರಿಂದಾಗಿ ಬಂಡವಾಳ ಪರ್ಯಾಪ್ತತಾ ಅನುಪಾತವು ಇನ್ನಷ್ಟು ಉತ್ತಮಗೊಳ್ಳಲಿದೆ.
ನೆಟ್ ಇಂಟರೆಸ್ಟ್ ಮಾರ್ಜಿನ್ ಕೂಡಾ ಶೇ 3.56 ರಿಂದ (30.09.2022) ಶೇ 3.63 ಕ್ಕೆ ಏರಿವೆ.
ಈ ಫಲಿತಾಂಶಗಳ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ.ಇ.ಓ ಶ್ರೀ ಶ್ರಿಕೃಷ್ಣನ್ ಹೆಚ್ ಅವರು “ಅರ್ಧ ವಾರ್ಷಿಕ ವಿತ್ತೀಯ ಫಲಿತಾಂಶವು ಅತ್ಯಂತ ಆಶಾದಾಯಕವಾಗಿದ್ದು, ಬ್ಯಾಂಕಿನ ಹೊಸ ಸಾಮಥ್ರ್ಯವನ್ನು ಅನಾವರಣಗೊಳಿಸಿದೆ. ಪ್ರಸಿದ್ಧ ಐದು ಕಂಪೆನಿಗಳಿಗೆ ಆದ್ಯತೆಯ ಆಧಾರದ ಮೇಲೆ ಒಟ್ಟು ರೂ. 800 ಕೋಟಿವರೆಗಿನ ಷೇರು ವಿತರಿಸಲಾಗಿದೆ. ಬ್ಯಾಂಕಿನ ಅಭಿವೃದ್ಧಿಯ ಪಯಣವು ಬಂಡವಾಳ ಹೆಚ್ಚಳದಿಂದ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಬ್ಯಾಂಕಿನ ವ್ಯಾಪ್ತಿಯನ್ನು ವಿಸ್ತರಿಸಲು, ಡಿಜಿಟಲ್ ರೂಪಾಂತರವನ್ನು ಅಳವಡಿಸಿಕೊಳ್ಳಲು ಮತ್ತು ನಮ್ಮ ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು, ಪಾಲುದಾರಿಕೆಗಳನ್ನು ಬೆಂಬಲಿಸಲು, ಎಲ್ಲಾ ಶೇರುದಾರರಿಗೆ ಮೌಲ್ಯವನ್ನು ತಲುಪಿಸಲು ಹಾಗೂ ನಮ್ಮ ಮಹತ್ವಾಕಾಂಕ್ಷೆಗಳನ್ನು ಉತ್ತೇಜಿಸಲು ಇದರಿಂದ ನೆರವಾಗಲಿದೆ. ಈ ಸಂದರ್ಭದಲ್ಲಿ ನಮ್ಮ ಹೊಸ ಸಾಂಸ್ಥಿಕ ಷೇರುದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಶತಮಾನೋತ್ಸವದ ಸಂಭ್ರಮವನ್ನು ಈ ಎಲ್ಲಾ ಸಂತೋಷಗಳೊಂದಿಗೆ ಸಂಭ್ರಮಿಸಲು ಸಂತೋಷವಾಗುತ್ತಿದೆ. ದೇಶಾದ್ಯಂತ ನಮ್ಮ ಸೇವೆಗಳನ್ನು ವಿಸ್ತರಿಸಲು ಎಲ್ಲರ ಸಹಕಾರಗಳನ್ನು ಕೋರುತ್ತೇನೆ”.
ಈ ಸಂದರ್ಭದಲ್ಲಿ ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಶೇಕರ್ ರಾವ್ ಅವರು ಮಾತನಾಡಿ “ವರ್ಷದ ಮೊದಲಾರ್ಧದಲ್ಲಿ ದೃಢವಾದ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಲು ನಾವು ಸಂತೋಷಪಡುತ್ತೇವೆ. ಅಭಿವೃದ್ಧಿಗೊಳ್ಳುತ್ತಿರುವ ಆರ್ಥಿಕ ಸವಾಲುಗಳ ಮುಖಾಂತರ, ನಾವು ಬ್ಯಾಂಕಿನ ವಿವಿಧ ಅಂಶಗಳಲ್ಲಿ ಸ್ಥಿತಿಸ್ಥಾಪಕತ್ವ, ಹೊಂದಿಕೊಳ್ಳುವಿಕೆ ಮತ್ತು ಸ್ಥಿರ ಬೆಳವಣಿಗೆಯನ್ನು ಪ್ರದರ್ಶಿಸಿದ್ದೇವೆ. ಉತ್ತಮ ಬ್ಯಾಂಕಿಂಗ್ ಅಭ್ಯಾಸಗಳು, ಗ್ರಾಹಕರ ತೃಪ್ತಿ ಮತ್ತು ಡಿಜಿಟಲ್ ಆವಿಷ್ಕಾರಗಳಿಗೆ ನಾವು ತೋರುವ ಬದ್ಧತೆ ನಮ್ಮ ಯಶಸ್ಸನ್ನು ಮುಂದುವರೆಸಿದೆ. ನಮ್ಮ ಗ್ರಾಹಕರಿಗೆ ಬಲವಾದ ಆರ್ಥಿಕ ಅಡಿಪಾಯವನ್ನು ಒದಗಿಸಲು ಮತ್ತು ಅಭಿವೃದ್ಧಿಗೊಳ್ಳುತ್ತಿರುವ ಆರ್ಥಿಕತೆಯಲ್ಲಿ ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ನಾವು ಸದಾ ಸನ್ನದ್ಧರಾಗಿದ್ದೇವೆ. ಕರ್ಣಾಟಕ ಬ್ಯಾಂಕ್ ತನ್ನ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವುದರೊಂದಿಗೆ ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸದಾ ಬದ್ಧವಾಗಿದೆ. ನಮ್ಮ ನೆಚ್ಚಿನ ಗ್ರಾಹಕರು, ಷೇರುದಾರರು ಮತ್ತು ಬ್ಯಾಂಕಿನ ಸಿಬ್ಬಂದಿಗಳ ನಿರಂತರ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ” ಎಂದು ನುಡಿದರು.