ಬೆಳ್ತಂಗಡಿ: ಮತ್ತೊಮ್ಮೆ ಶಾಸಕನಾಗಿ ಆಯ್ಕೆ ಮಾಡಿದ್ದಲ್ಲಿ ತಾಲೂಕಿಗೆ ಆರು ಸಾವಿರ ಕೋಟಿ ಅನುದಾನವನ್ನು ತಂದು ತಾಲೂಕಿನ ಸಮಗ್ರ ಅಭಿವೃದ್ಧಿಯನ್ನು ಮಾಡುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಭಾನುವಾರ ಧರ್ಮಸ್ಥಳ ಸಹಕಾರಿ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಧರ್ಮಸ್ಥಳ ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಳೆದ ಐದು ವರ್ಷದಲ್ಲಿ ಕಾರ್ಯಕರ್ತರು ಹೇಳಿದ ಕೆಲಸವನ್ನು ಮಾಡಿದ್ದೇನೆ. ಮುಂದಿನ ಐದು ವರ್ಷದಲ್ಲಿ ಉಳಿದ ಕೆಲಸವನ್ನು ಮಾಡಿಕೊಡುತ್ತೇನೆ. ಕಾಂಗ್ರೆಸ್ ಇಂದು ಅಪಪ್ರಚಾರ ಮಾಡುವ ಕೆಲಸವನ್ನು ಮಾಡುತ್ತಿದ್ದು, ಅದಕ್ಕೆ ತಕ್ಕ ಉತ್ತರವನ್ನು ನೀಡುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ದೇಶ ಇಂದು ವಿಶ್ವಮಟ್ಡದಲ್ಲಿ ಗುರುತಿಸುವಂತೆ ಮಾಡಿದ್ದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು. ದೇಶಕ್ಕೆ ಮೋದಿ ಕೆಲಸ ಮಾಡಿದಂತೆ ತಾಲೂಕಿಗೆ ಹರೀಶ್ ಪೂಂಜ ಕೆಲಸ ಮಾಡಿದ್ದಾರೆ. ಮತ್ತೊಮ್ಮೆ ಅವರನ್ನು ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಜನಾರ್ಧನ್, ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್, ಧರ್ಮಸ್ಥಳ ಮಹಾಶಕ್ತಿಕೇಂದ್ರದ ಚುನಾವಣಾ ಪ್ರಭಾರಿಗಳಾದ ರಾಜೇಶ್ ಪೆಂರ್ಬುಡ, ಮಹಾಬಲ ಗೌಡ, ಮಂಡಲ ಉಪಾಧ್ಯಕ್ಷರಾದ ಸೀತಾರಾಮ ಬೆಳಾಲ್, ಕೊರಗಪ್ಪ ಗೌಡ, ಯುವಮೋರ್ಚಾ ಅಧ್ಯಕ್ಷ ಯಶವಂತ ಬೆಳಾಲ್ ಇದ್ದರು.
ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯೋಗೀಶ್ ಗೌಡ ಆಲಂಬಿಲ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕರುಣಾಕರ ಶಿಶಿಲ ವಂದಿಸಿದರು.