ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಕಜಕ್ಕೆ- ಎಳನೀರು ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡದಂತೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮನವಿ ಸಲ್ಲಿಸಿದೆ.
ರಸ್ತೆ ನಿರ್ಮಾಣವಾದಲ್ಲಿ ಅದು ಸುಪ್ರೀಂಕೋರ್ಟ್ನ ಆದೇಶದ ಸ್ಪಷ್ಟ ಉಲ್ಲಂಘನೆಯಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ದೇಶದ ಉಚ್ಛ ನ್ಯಾಯಾಲಯವು, ಯಾವುದೇ ರಕ್ಷಿತಾರಣ್ಯ, ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ವಲಯ ಮತ್ತು ಅಭಯಾರಣ್ಯಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಬಫರ್ ಝೋನ್ ನಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿಷೇಧಿಸಿ 2022 ರ ಜೂ.3 ರಂದು ಆದೇಶ ಹೊರಡಿಸಿದೆ.
ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾದ ಅಗತ್ಯವಿದ್ದು, ಮಲಂವತಿಗೆ ಗ್ತಾಮದ ಕಜಕ್ಕೆ- ಎಳನೀರಿನ 0.95 ಹೆಕ್ಟೇರ್ ಪ್ರದೇಶ (4.75 ಕಿ.ಮೀ) ಬಫರ್ ಝೋನ್ನಲ್ಲಿ ಬರುತ್ತದೆ. ಹೀಗಾಗಿ ಪ್ರಸ್ತಾವಿತ ರಸ್ತೆ ನಿರ್ಮಾಣ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಒಕ್ಕೂಟವು ಕಾರ್ಕಳದಲ್ಲಿನ ಕುದುರೆಮುಖ ವನ್ಯಜೀವಿ ವಿಭಾಗದ ಕಚೇರಿಗೆ ಆ.24 ರಂದು ಮನವಿ ನೀಡಿದೆ. ಇದರ ಪ್ರತಿಯನ್ನು ಬೆಳ್ತಂಗಡಿಯಲ್ಲಿನ ವನ್ಯಜೀವಿ, ಅರಣ್ಯ ಇಲಾಖಾ ಕಚೇರಿಗೂ ತಲುಪಿಸಲಾಗಿದೆ. ವನ್ಯಜೀವಿ ಇಲಾಖೆಯವರು ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.