ಬೆಳ್ತಂಗಡಿ: ತಾಲೂಕು ಪಂಚಾಯಿತಿ ಬೆಳ್ತಂಗಡಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕೃಷಿ ಇಲಾಖೆ ಬೆಳ್ತಂಗಡಿ ಇದರ ಜಂಟಿ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ ವಿವಿಧ ಇಲಾಖೆಗಳಿಂದ ನೀಡಲ್ಪಡುವ ಸಲಕರಣೆಗಳ ವಿತರಣಾ ಕಾರ್ಯಕ್ರಮ ಬೆಳ್ತಂಗಡಿ ಮಿನಿ ವಿಧಾನಸೌಧ ಆವರಣದಲ್ಲಿ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅರ್ಹ ಫಲಾನುಭವಿಗಳಿಗೆ ಸಲಕರಣೆಯನ್ನು ವಿತರಿಸಿ ಮಾತನಾಡಿ, ಸಾಮಾನ್ಯರಂತೆ ವಿಕಲಾಂಗರು ಜೀವನ ನಡೆಸಬೇಕೆಂಬ ಸದುದ್ದೇಶದಿಂದ ತಾಲೂಕಿನಲ್ಲಿ ಈಗಾಗಾಗಲೆ ರಾಜ್ಯದಲ್ಲೆ ಅತೀ ಹೆಚ್ಚು ಸಲಕರಣೆ ವಿತರಿಸುವ ಕಾರ್ಯವಾಗಿದೆ. ಈಮೂಲಕ ಅವರ ಬಾಳಲ್ಲಿ ಮಂದಹಾಸ ಹಾಗೂ ಆತ್ಮವಿಶ್ವಾಸ ಮೂಡಿಸುವ ಕಾರ್ಯವಾಗಿದೆ ಎಂದರು.
ರಾಜ್ಯದಲ್ಲಿ ಮೊದಲಬಾರಿಗೆ ವಿಕಲಾಂಗರಿಗೆ ತ್ರಿಚಕ್ರ ವಿತರಿಸುವ ಕಾರ್ಯ ಬೆಳ್ತಂಗಡಿಯಲ್ಲಾಗಿದೆ. ಅದರೊಂದಿಗೆ ಕೃಷಿಕರಿಗೆ, ಕೈಗಾರಿಕ ಉಪಯೋಗಕ್ಕೆ ಸಲಕರೆಣೆ ಸಹಿತ ಕಾರ್ಮಿಕ ಇಲಾಖೆಗಿಂದ 18 ಕೋ.ರೂ. ಅಧಿಕ ಕಾರ್ಮಿಕ ಯೋಗ್ಯ ಸವಲತ್ತು ಒದಗಿಸಲಾಗಿದೆ. ಮುಂದಿನ ಅವಧಿಯಲ್ಲಿ ಜನತೆ ಆಶೀರ್ವಾದ ಮಾಡಿದಲ್ಲಿ ವ್ಯಕ್ತಿ ವ್ಯಕ್ತಿಯನ್ನು ಗುರುತಿಸಿ ಸವಲತ್ತನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
12 ಜನ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ರೆಟ್ರೋ ಫಿಟ್ ಮೆಂಟ್, 6 ಜನ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ಶ್ರವಣ ಸಾಧನ, 3 ಜನ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ಅಧ್ಯಯನ ಮಾಡುವ ಗಾಲಿ ಕುರ್ಚಿ, 2 ಜನ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ಒರಗುವ ಗಾಲಿ ಕುರ್ಚಿ, 129 ಜನ ಅರ್ಹ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಹಾಗೂ ಸಾಧನ ಸಲಕರಣೆ, 23 ಜನ ಅರ್ಹ ಕೃಷಿಕ ಫಲಾನುಭವಿಗಳಿಗೆ ಕೃಷಿ ಸಾಧನಾ ಸಲಕರಣೆ ಗಳನ್ನು ವಿತರಿಸಲಾಯಿತು.
ಬೆಳ್ತಂಗಡಿ ಪಟ್ಟಣ ಪಂಷಾಯಿತಿ ಉಪಾಧ್ಯಕ್ಷ ಜಯಾನಂದ ಗೌಡ, ಬೆಳ್ತಂಗಡಿ ತಾ.ಪಂ. ಇಒ ಕುಸುಮಾಧರ್, ಬೆಳ್ತಂಗಡಿ ಕೃಷಿ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್, ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ಮಂಜುನಾಥ ಹೆಗ್ಡೆ, ತಾಂತ್ರಿಕ ಕೃಷಿ ಅಧಿಕಾರಿ ಹುಮೇರ ಜಬೀನ್, ಪುನರ್ವಸತಿ ಕಾರ್ಯಕರ್ತರ ತಾ.ಪಂ. ಸಂಯೋಜಕ ಜಾನ್ ಬ್ಯಾಸ್ಟಿಸ್ ಡಿಸೋಜ, ತಾ.ಪಂ. ಸಂಯೋಜಕ ಜಯಾನಂದ ಲಾಯಿಲ ಕಾರ್ಯಕ್ರಮ ನಿರ್ವಹಿಸಿದರು.