ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ಅಬ್ಬನ್ ಕೆರೆ ಸಮೀಪ ಪತ್ನಿಯಿಂದ ಪತಿಯ ಕೊಲೆಯಾದ ಘಟನೆ ಜು.5 ರಂದು ನಡೆದಿದೆ. ನಾವೂರು ಗ್ರಾಮದ ಅರಣ್ಯ ಪ್ರವಾಸಿ ಮಂದಿರ ಬಳಿಯ ಅಬ್ಬನ್ ಕೆರೆ ನಿವಾಸಿ ಬೇಬಿ (60) ಮೃತಪಟ್ಟವರು. ಪತ್ನಿ ನೆಲ್ಲಮ್ಮ (55) ಆರೋಪಿ.
ಕೃಷಿಕ ದಂಪತಿಯಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದು, ಪುತ್ರಿಗೆ ವಿವಾಹವಾಗಿದ್ದು, ಓರ್ವ ಪುತ್ರ ವಿದೇಶದಲ್ಲಿದ್ದು, ಮತ್ತೋರ್ವ ಪುತ್ರ ಬೇರೆಡೆ ವಾಸವಾಗಿದ್ದಾರೆ. ಮನೆಯಲ್ಲಿ ಇಬ್ಬರೇ ಇದ್ದರು. ಮೃತ ಬೇಬಿ ಅವರು ಕೃಷಿಕರಾಗಿದ್ದು, ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದರು.
ಪತ್ನಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಯಾವುದೋ ಕಾರಣಕ್ಕೆ ಪತಿಯನ್ನು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.