ಬೆಳ್ತಂಗಡಿ: ಬದುಕಿನಲ್ಲಿ ನೆಮ್ಮದಿಯ ಜೀವನ ಕಾಣಲು ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸಾಧ್ಯ. ದೇವರು ಪ್ರತಿಯೊಬ್ಬರಿಗೂ ಅವಕಾಶವನ್ನು ಕೊಟ್ಟಿದ್ದಾನೆ ಅದನ್ನು ಬಳಸಿಕೊಳ್ಳುವ ರೀತಿಯಲ್ಲಿ ಅವನ ಯಶಸ್ಸು ಕಾಣುತ್ತದೆ. ವಿದ್ಯಾರ್ಥಿಗಳು ಶಿಕ್ಷಣವನ್ನು ಶಿಕ್ಷೆ ಎಂದು ಭಾವಿಸಬಾರದು ಶಿಕ್ಷಣ ಎಂಬುದು ಪ್ರತಿಭೆಯನ್ನು ಹೊರತರುವ ಸಾಧನವಾಗಿದೆ. ರತ್ನಮಾನಸಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸುವ ಶಿಕ್ಷಣ ಸಿಗುತ್ತಿದ್ದು ಇಲ್ಲಿ ಅವಕಾಶ ಪಡೆದ ವಿದ್ಯಾರ್ಥಿಗಳು ಭಾಗ್ಯವಂತರು ಎಂದು ವಿಧಾನಪರಿಷತ್ ಶಾಸಕ ಪ್ರತಾಪ್ಸಿಂಹ ನಾಯಕ್ ಹೇಳಿದರು.
ಅವರು ಸೋಮವಾರ ಉಜಿರೆ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ರತ್ನಮಾನಸ ಜೀವನ ಶಿಕ್ಷಣ ವಸತಿ ನಿಯಲದ ೮ನೇ ತರಗತಿಗಳ ವಿದ್ಯಾರ್ಥಿಗಳ ಪ್ರವೇಶೋತ್ಸವ ಹಾಗೂ ಸೊಳ್ಳೆ ಪರದೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳು ಉತ್ಸಾಹದಿಂದ ವಿದ್ಯಾರ್ಥಿ ಜೀವನವನ್ನು ಕಳೆಯಬೇಕು. ಶ್ರೀಕ್ಷೇತ್ರ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳಲ್ಲಿ ಸುರಕ್ಷಿತ, ಸಂಸ್ಕಾರಯುತ ಸುಸಂಸ್ಕೃತಿಯ ಶಿಕ್ಷಣ ಸಿಗುತ್ತಿದ್ದು ತಮ್ಮ ಮಕ್ಕಳಿಗೆ ಇಲ್ಲಿ ಕಲಿಯಲು ಅವಕಾಶ ಸಿಕ್ಕಿರುವುದು ಭಾಗ್ಯ ಎಂದು ಪೋಷಕರು ತಿಳಿಯಬೇಕು ಎಲ್ಲರಿಗೂ ಈ ಭಾಗ್ಯ ಸಿಗಲು ಸಾಧ್ಯವಿಲ್ಲ. ರತ್ನಮಾನಸದ ವಾತಾವರಣ ಮನೆಯ ವಾತಾವರಣವನ್ನು ಮೀರಿಸಿದ ಅನುಭವ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದರು.
ಉಜಿರೆ ಎಸ್ಡಿಎಂ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೀಶ್ ಎಂ. ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರತ್ನಮಾನಸದಲ್ಲಿ ರೂಪಿಸಲಾಗುತ್ತದೆ. ಶಿಸ್ತು ಮತ್ತು ಸಂಸ್ಕಾರಯುತ ಶಿಕ್ಷಣ ಇಲ್ಲಿ ಸಿಗುತ್ತಿರುವುದರಿಂದ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಕಾಣಬಹುದು. ನಾನು ಕೂಡ ರತ್ನಮಾನಸದ ವಿದ್ಯಾರ್ಥಿಯಾದ ಕಾರಣ ಈ ಒಂದು ಹುದ್ಧೆಗೆ ಬರಲು ಕಾರಣವಾಯಿತು. ಎಲ್ಲಾ ವಿದ್ಯಾರ್ಥಿಗಳು ಶ್ರೇಷ್ಠ ವ್ಯಕ್ತಿಗಳಾಗಿ ಬರಬೇಕು ಎನ್ನುವ ಕನಸನ್ನು ಕಾಣಿರಿ ಎಂದರು.
ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಧ.ಮಂ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜನಾರ್ಧನ ಎಂ., ಎಸ್ಡಿಎಂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ, ಎಸ್ಡಿಎಂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಲಲಿತಾ, ಮಂಗಳೂರು ಕೀಟ ಶಾಸ್ತç ತಜ್ಞೆ ಮಂಜುಳ, ಆರೋಗ್ಯ ಇಲಾಖಾ ಹಿರಿಯ ನಿರೀಕ್ಷಕ ಸೋಮನಾಥ್, ಕಿರಿಯ ನಿರೀಕ್ಷಕ ಪ್ರದೀಪ್, ನಿಲಯಪಾಲಕ ಯತೀಶ್ ಬಳಂಜ, ಉಪಸ್ಥಿತರಿದ್ದರು.
ಸಹಪಾಲಕ ರವಿಚಂದ್ರ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಸಂತೋಷ್ ಸ್ವಾಗತಿಸಿ, ತೇಜಸ್ವಿ ವಂದಿಸಿದರು. ಗಣೇಶ್ ಕಾರ್ಯಕ್ರಮ ನಿರೂಪಿಸಿದರು.