ಮಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಲು ರಾಷ್ಟ್ರೀಯ ಹೆದ್ದಾರಿ 169 ಭೂಮಾಲೀಕರ ಹೋರಾಟ ಸಮಿತಿ ನಿರ್ಧಾರ ಕೈಗೊಂಡಿದೆ. ಕುಲಶೇಖರ ಸೇಕ್ರೆಡ್ ಹಾರ್ಟ್ಸ್ ಶಾಲೆ ಸಭಾಂಗಣದಲ್ಲಿ ಬುಧವಾರ ಈ ಸಂಬಂಧ ಸಭೆ ನಡೆಯಿತು.
ಪದವು, ಪಡುಮಾರ್ನಾಡು, ಪುತ್ತಿಗೆ, ಸಾಣೂರು ಸೇರಿದಂತೆ ಹೆದ್ದಾರಿಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು ಹೆದ್ದಾರಿ ಸಂತ್ರಸ್ತರಿಗೆ ಪರಿಹಾರ ತಾರತಮ್ಯ, ವಿಳಂಬ ನೀತಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಕುರಿತು ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥೋಮಸ್ ನ್ಯೂಸ್ ಕನ್ನಡ ಪ್ರತಿನಿಧಿಯೊಂದಿಗೆ ಮಾತನಾಡಿದ್ದು, ಅದರ ವಿವರ ಇಲ್ಲಿದೆ.
ಕುಲಶೇಖರದಿಂದ ಕಾರ್ಕಳದ ಸಾಣೂರುವರೆಗಿನ ಭೂಸ್ವಾಧೀನಕ್ಕೆ ಸಂಬಂಧಿಸಿ ನ್ಯಾಯೋಚಿತ ಪರಿಹಾರ ಪಡೆಯಲು ಅವಕಾಶವಿದ್ದರೂ ಅಧಿಕಾರಿಗಳ ಅವಗಣನೆ, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಮರಿಯಮ್ಮ ಥೋಮಸ್ ತಿಳಿಸಿದ್ದಾರೆ. ಪಡುಮಾರ್ನಾಡು, ಸಾಣೂರು, ಪುತ್ತಿಗೆ ಗ್ರಾಮಗಳಲ್ಲಿ ಹೆದ್ದಾರಿಗಾಗಿ ಭೂಮಿ ಕಳೆದುಕೊಂಡಿರುವವರಿಗೆ ಪರಿಹಾರ ನೀಡುವ ಕುರಿತು ಕೋರ್ಟ್ನಿಂದ ಅಂತಿಮ ಆದೇಶವಾಗಿದೆ. ಆದರೆ ಆದೇಶ ದೊರೆತು 7ತಿಂಗಳು ಕಳೆದರೂ ಪರಿಹಾರ ಕುರಿತು ಯಾವುದೇ ಪ್ರಕ್ರಿಯೆ ನಡೆದಿಲ್ಲ. ಪುತ್ತಿಗೆ, ಸಾಣೂರು ಕಾರ್ಕಳ ವ್ಯಾಪ್ತಿಗೆ ಬರುತ್ತದೆ. ಸಚಿವ ಸುನೀಲ್ ಕುಮಾರ್ 3 ತಿಂಗಳ ಹಿಂದೆ ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ವಾರದೊಳಗೆ ಪರಿಹಾರ ಒದಗಿಸುವಂತೆ ಸೂಚಿಸಿದ್ದರೂ ಯಾವುದೇ ಫಲ ನೀಡಿಲ್ಲ. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ.
ಜನಪ್ರತಿನಿಧಿಗಳ ಅಸಮರ್ಥರಾಗಿರುವ ಕಾರಣ ಅಧಿಕಾರಿಗಳು ಅವರನ್ನು ಕ್ಯಾರೇ ಎನ್ನುತ್ತಿಲ್ಲ. ಅಲ್ಲದೆ ಹೆದ್ದಾರಿ ಕಾಮಗಾರಿ ಅಧ್ವಾನ ಕೂಪವಾಗಿದ್ದು 6 ಗಂಟೆ ಬಳಿಕ ಸಂಚಾರ ಸಾಧ್ಯವಿಲ್ಲ ಎಂಬಂತಾಗಿದೆ. ಯಾರ ಜೀವ ಹೋದರೆ ಏನು ಎಂಬ ನಿರ್ಲಕ್ಷ್ಯ ಧೋರಣೆ ಅಧಿಕಾರಿಗಳು, ಜನಪ್ರತಿನಿಧಿಗಳದ್ದು, ಪದವಿಗೆ ಸಂಬಂಧಪಟ್ಟಂತೆ ಪರಿಹಾರಕ್ಕೆ ಕೋರ್ಟ್ನಿಂದ ಆದೇಶವಾಗಿದ್ದು, ಅದರಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಆದರೆ ಉಳಿದ ಹಳ್ಳಿಗಳಿಗೆ ಸಂಬಂಧಪಟ್ಟಂತೆ ಪರಿಹಾರ ತಕ್ಷಣ ಪರಿಹಾರ ಒದಗಿಸಬೇಕಿತ್ತು. ಆದರೆ ಪರಿಹಾರ ಒದಗಿಸಲಿಲ್ಲ.
ಕಾರ್ಪೋರೇಶನ್ನಿಂದ ಕೇಂದ್ರದವರೆಗೂ ಒಂದೇ ಪಕ್ಷ ಅಧಿಕಾರದಲ್ಲಿದ್ದರೂ ಭೂಸಂತ್ರಸ್ತರಿಗೆ ಪರಿಹಾರ ಒದಗಿಸಲು ಸಾಧ್ಯವಾಗದಿರುವುದು ವಿಪರ್ಯಾಸವೇ ಸರಿ. ನಾವು ಕಾನೂನು ಬಿಟ್ಟು ಅಕ್ರಮವಾಗಿ ಕೊಡಿ ಎಂದು ಹೇಳುತ್ತಿಲ್ಲ. ನ್ಯಾಯುಯುತ ಪರಿಹಾರ ಕೇಳುತ್ತಿದ್ದೇವೆ. ಆದರೆ ಅದನ್ನು ನೀಡಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಈ ಕಾರಣದಿಂದ ಸಾಣೂರು, ಪಡುಮಾರ್ನಾಡು, ಪುತ್ತಿಗೆ ಗ್ರಾಮಸ್ಥರು, ಭೂಸಂತ್ರಸ್ತರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.