News Karnataka Kannada
Thursday, May 02 2024
ಮಂಗಳೂರು

ಗಿಡಗಳ ಬಗ್ಗೆ ಪ್ರತಿಯೊಬ್ಬರೂ ಮಾತೃ ಹೃದಯವನ್ನು ಬೆಳೆಸಿಕೊಳ್ಳಬೇಕು: ಡಾ. ಡಿ. ವೀರೇಂದ್ರ ಹೆಗ್ಗಡೆ

Everyone should develop a mother's heart about plants: Dr. D. Veerendra Heggade
Photo Credit : News Kannada

ಬೆಳ್ತಂಗಡಿ : ‘ಗಿಡ ನೆಡುವುದು ಮುಖ್ಯವಲ್ಲ, ಅದರ ಸಂರಕ್ಷಣೆಯನ್ನು ಬದ್ಧತೆಯಿಂದ ಮಾಡಬೇಕು. ಗಿಡಗಳ ಬಗ್ಗೆ ಪ್ರತಿಯೊಬ್ಬರೂ ಮಾತೃ ಹೃದಯವನ್ನು ಬೆಳೆಸಿಕೊಳ್ಳಬೇಕು’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ), ಧರ್ಮಸ್ಥಳ, ಮಂಗಳೂರು ಪ್ರಾದೇಶಿಕ ಅರಣ್ಯ ವಿಭಾಗ, ಪುತ್ತೂರು ವಿಭಾಗ, ಉಪ್ಪಿನಂಗಡಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯದ್ಯಂತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಶಲಕ್ಷ ಗಿಡಗಳ ನಾಟಿ ಮತ್ತು ಕರ್ನಾಟಕ ಸರ್ಕಾರದ ಕೋಟಿ ವೃಕ್ಷ ಆಂದೋಲನದ ಪ್ರಯುಕ್ತ ತಾಲ್ಲೂಕಿನ ಪುರುಷರ ಮಜಲು ಪರಿಸರದ ತಣ್ಣೀರುಪಂತ ಮೀಸಲು ಅರಣ್ಯ ಪ್ರದೇಶದಲ್ಲಿ 4 ಸಾವಿರ ಹಣ್ಣಿನ ಗಿಡಗಳನ್ನು ನಾಟಿ ಮಾಡಲು ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ಅಂಗವಾಗಿ ಹಣ್ಣಿನ ಗಿಡಗಳನ್ನು ನೆಟ್ಟು ಬಳಿಕ ತಣ್ಣೀರುಪಂತ ಗ್ರಾಮದ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇವತ್ತು ಕಾಡಿನಲ್ಲಿರುವ ಮಾಂಸಹಾರಿ ಪ್ರಾಣಿಗಳು ಕ್ಷೀಣಿಸಿವೆ. ಇರುವಂತಹ ಸಸ್ಯಹಾರಿ ಪ್ರಾಣಿಗಳು ನಾಡಿಗೆ ಬಂದು ಕೃಷಿಯನ್ನು ಹಾಳು ಮಾಡುತ್ತಿವೆ. ಹೀಗಾಗಿ ಅವುಗಳಿಗೆ ಬೇಕಾದ ಆಹಾರ ಕಾಡಿನಲ್ಲೇ ಸಿಗುವಂತಾದರೆ ಅವು ಊರಿಗೆ ಬರುವುದು ತಪ್ಪುತ್ತದೆ. ಹಾಗಾಗಿ ಕಾಡಿನಲ್ಲಿ ಅವುಗಳು ತಿನ್ನಬಹುದಾದ ಗಿಡಗಳನ್ನು, ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸಿ ಅವು ಉಳಿಯುವಂತೆ ಮಾಡಬೇಕು. ಹೀಗಾಗಿ ನಾವು ನೆಡುವ ಗಿಡಗಳು, ಬಿತ್ತುವ ಬೀಜಗಳು ಮುಂದೆ ಸ್ವಚ್ಛ ಪರಿಸರ ನಿರ್ಮಾಣದ ಜೊತೆಗೆ ಪ್ರಾಣಿಗಳೂ ಬದುಕಲು ಆಶ್ರಯ ನೀಡಿದಂತಾಗುತ್ತದೆ. ವಿಜ್ಞಾನಿಗಳು ಹೇಳಿದ್ದನ್ನು ತಿರಸ್ಕಾರ ಮಾಡದೆ ನಾವು ಬದುಕಿ ಇನ್ನೊಬ್ಬರಿಗೆ ಬದುಕಲು ಅವಕಾಶ ಮಾಡಿಕೊಡಬೇಕು’ ಎಂದರು.

‘ಅರಣ್ಯ ಇಲಾಖೆ ಕೇವಲ ಸರ್ಕಾರದ ಕೆಲಸವನ್ನು ಮಾತ್ರ ಮಾಡುವುದಿಲ್ಲ. ಸಮಾಜದ ಕೆಲಸವನ್ನು ಮಾಡುತ್ತಿದೆ. ಕಾಡು ಬೆಳೆಸಿ ಪರಿಸರದ ಜೊತೆ ನಮ್ಮ ರಕ್ಷಣೆ ಮಾಡುವ ಬದ್ಧತೆಯನ್ನು ಅವರು ಬೆಳೆಸಿಕೊಂಡಿದ್ದಾರೆ. ಅವರಿಗೆ ಸಹಕರಿಸುವ ಮನೋಭಾವ ನಮ್ಮೆಲ್ಲರಲ್ಲೂ ಬೆಳೆಯಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ‘ಪಂಚಭೂತಗಳು ಸಮತೋಲನದಲ್ಲಿದ್ದಾಗ ಪ್ರಕೃತಿ ಚೆನ್ನಾಗಿರುತ್ತದೆ. ಪ್ರಕೃತಿ ಚೆನ್ನಾಗಿದ್ದಾಗ ಮಾನವ ಆರೋಗ್ಯ ಕೂಡಾ ಚೆನ್ನಾಗಿರಲು ಸಾಧ್ಯ. ಶ್ರೀ ಕ್ಷೇತ್ರ ಧರ್ಮಸ್ಥಳದ ಯಾವುದೇ ಕಾರ್ಯಗಳಲ್ಲಿ ದೂರದೃಷ್ಠಿಯ ಯೋಚನೆಗಳಿದ್ದು, ಸಮಾಜ ಮತ್ತು ದೇಶಕ್ಕೆ ಒಳಿತನ್ನೇ ಬಯಸುವಂತಿರುತ್ತದೆ’ ಎಂದರು.

ಶಾಸಕ ಹರೀಶ್ ಪೂಂಜ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜನಜಾಗೃತಿ ಪ್ರಾದೇಶಿಕ ವಿಭಾಗದ ವತಿಯಿಂದ ಪ್ರಕಟಿಸಲಾದ ಪರಿಸರ ಸಂರಕ್ಷಣೆಗಾಗಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಪುಸ್ತಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್. ಮಂಜುನಾಥ್ ಬಿಡುಗಡೆಗೊಳಿಸಿ ಮಾತನಾಡಿದರು. ಹಾಗೂ ಶೌರ್ಯ ತಂಡದ 360 ಸ್ವಯಂಸೇವಕರ ವಿವರವುಳ್ಳ ಪುಸ್ತಕವನ್ನು ಡಾ. ಡಿ. ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು. ವಿವಿಧ ಶಾಲೆ ಹಾಗೂ ಸಂಘ ಸಂಸ್ಥೆಗಳಿಗೆ ಉಪ್ಪಿನಂಗಡಿ ವಲಯ you ವಿವಿಧ ಹಣ್ಣಿನ ಗಿಡಗಳನ್ನು ವಿತರಿಸಿದರು. ಗಿಡ ನೆಟ್ಟು ಪೋಷಿಸುವ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.

ವೇದಿಕೆಯಲ್ಲಿ ತಣ್ಣೀರುಪಂತ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾ ಇಶ್ರತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ, ವಲಯಾಧ್ಯಕ್ಷ ಪ್ರಭಾಕರ ಗೌಡ ಪೊಸಂದೋಡಿ, ಯೋಜನಾ ನಿರ್ದೇಶಕ ಮಹಾಬಲ ಕುಲಾಲ್ ಇದ್ದರು.

ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಪಾಯಿಸ್ ಪ್ರಸ್ತಾವಿಸಿ ಸ್ವಾಗತಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್ ಮಾರ್ನಾಡ್ ಹಾಗೂ ಯೋಜನಾಧಿಕಾರಿ ಗಣೇಶ್ ಆಚಾರ್ಯ ನಿರೂಪಿಸಿದರು. ಯೋಜನಾಧಿಕಾರಿ ದಯಾನಂದ ಪೂಜಾರಿ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು