ಬೆಳ್ತಂಗಡಿ: ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು. ವಿದ್ಯಾರ್ಥಿನಿಯರ ಯಕ್ಷಗಾನ ನೃತ್ಯ ಪ್ರದರ್ಶನದ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತ ಮಾಡಲಾಯಿತು.
ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ ಗಿರೀಶ್ ಹೆಗ್ಡೆ ಮಾತನಾಡಿ ಯಕ್ಷಗಾನ ಒಂದು ಪರಿಪೂರ್ಣ ಕಲೆ. ಇದು ಒಂದು ಆಶು ಸಾಹಿತ್ಯ, ಆಶುಪ್ರದರ್ಶನವಾಗಿದೆ. ಯಕ್ಷಗಾನ ಕಲಾವಿದರು ಎಲ್ಲಾ ಪಾತ್ರಗಳನ್ನು ನಿರ್ವಹಿಸಲು ತಯಾರಿಯಾಗಿರುತ್ತಾರೆ.
ವಿದ್ಯಾರ್ಥಿ ಜೀವನದಲ್ಲಿ ಯಕ್ಷಗಾನವನ್ನು ಕಲಿತರೆ ಮುಂದಿನ ಪೀಳಿಗೆಗೆ ಮುಂದುವರೆಸಿಕೊಂಡು ಹೋಗಬಹುದು ಎಂದು ಹೇಳಿದರು. ಯಕ್ಷಗಾನ ತರಬೇತುದಾರ ಲಕ್ಷ್ಮಣ ಬೆಳಾಲು ಯಕ್ಷಗಾನ ಕಲೆ ನಿತ್ಯ ವಿನೂ ತನ. ಕಲಾವಿದನಾದವನು ತನ್ನ ಯಾವ ನೋವುಗಳಿದ್ದರೂ ಪ್ರೇಕ್ಷಕರನ್ನು ಅದ್ಭುತ ಲೋಕಕ್ಕೆ ಕರೆದುಕೊಂಡು ಹೋಗುವ ಕಲಾವಿದನಾಗಿರುತ್ತಾನೆ ಎಂದರು.
ಅಧ್ಯಕ್ಷತೆವಹಿಸಿದ ಶಾಲಾ ಮುಖ್ಯ ಶಿಕ್ಷಕ ಪಿ. ಸುಬ್ರಮಣ್ಯ ರಾವ್ ಮಾತನಾಡಿ ಯಕ್ಷಗಾನ ಕಲಿಯುವುದರಿಂದ ಭಾಷಾ ಸ್ಪಷ್ಟತೆ ಹೆಚ್ಚುತ್ತದೆ. ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಯುತ್ತದೆ. ಇದರಿಂದ ಮಕ್ಕಳು ಎಳವೆಯಲ್ಲಿಯೇ ಯಕ್ಷಗಾನ ಕಲಿಯಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಚಿನ್ಮಯಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಕುಸುಮಿತ ವಂದಿಸಿದರು.