ಉಜಿರೆ: ಅಲ್ಲಿ ನೃತ್ಯದ ಸೊಗಡಿತ್ತು. ಭಕ್ತಿಯ ಸೆಳಕಿತ್ತು. ಯೋಗದರ್ಶನವಿತ್ತು. ಇದರೊಂದಿಗೆ ಗಾನಮಾಧುರ್ಯದ ಸ್ವಾರಸ್ಯವೂ ಇತ್ತು. ಅಲ್ಲಿದ್ದವರೊಳಗೆ ಸ್ಫೂರ್ತಿಯ ಬೆಳಕನ್ನು ಹರಡಿತ್ತು.
ಉಡುಪಿಯ ಭಾರ್ಗವಿ ಆರ್ಟ್ಸ್ ಆ್ಯಂಡ್ ಡಾನ್ಸ್ ಅಕಾಡೆಮಿಯ ತಂಡವು ಲಕ್ಷದೀಪೋತ್ಸವದ ಪ್ರಯುಕ್ತ ಅಮೃತವರ್ಷಿಣಿ ವೇದಿಕೆಯಲ್ಲಿ ನಡೆಸಿಕೊಟ್ಟ ಲಲಿತಕಲಾಗೋ಼ಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ‘ಭಾವ-ಯೋಗ-ಗಾನ’ದ ವಿಶೇಷ ಝಲಕ್ ಇದು.
ನೃತ್ಯದ ಜೊತೆ ಆಧ್ಯಾತ್ಮ, ಯೋಗ, ಗಾನ ಒಂದೇ ವೇದಿಕೆಯಲ್ಲಿ ಮೇಳೈಸಿ ಅಲ್ಲಿದ್ದ ಹಲವು ಕಲಾ ಆರಾಧಕರನ್ನು ಸೆಳೆಯಿತು. ನೃತ್ಯಕ್ಕೆ ಸಂಬಂಧಿಸಿದಂತೆ ಯಕ್ಷಗಾನ, ಕಥಕ್ಕಳಿ ಪ್ರಕಾರಗಳ ಅಭಿವ್ಯಕ್ತಿ ಇತ್ತು. ಯೋಗದ ವಿವಿಧ ಭಂಗಿಗಳ ಅನಾವರಣವಿತ್ತು. ಭಕ್ತಿಭಾವಗಳ ಕಾವ್ಯಾತ್ಮಕ ಸಾಲುಗಳೊಂದಿಗಿನ ಅಭಿನಯ ವೈಶಿಷ್ಟ್ಯ ರಂಜಿಸಿತು.
ಯಕ್ಷಗಾನ, ಕತಕಳಿ, ಕಾಳಿಂಗ ಮರ್ದನ, ಶಿವ ತಾಂಡವ, ಕುಂಭ ನೃತ್ಯ, ನಟರಾಜ ನಮನ, ಹೀಗೆ ವಿವಿಧ ರೀತಿಯ ನೃತ್ಯ ಪ್ರಸ್ತುತಿ ನಾಟ್ಯದ ಕುರಿತ ವಿವಿಧ ಆಯಾಮಗಳನ್ನು ಪರಿಚಯಿಸಿತು. ಸತತ 90 ನಿಮಿಷಗಳ ಕಾಲ ನಡೆದ ನೃತ್ಯವು ರೋಮಾಂಚನಕಾರಿಯಾಗಿತ್ತು, ನಿರೂಪಕ ಆರ್, ಜೆ. ಪ್ರಸನ್ ಅವರು ಪ್ರೇಕ್ಷಕರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯುವಕನಿಗೆ ಡಾ.ವೀರೇಂದ್ರ ಹೆಗ್ಗಡೆಯವರು ಉಡುಗೊರೆಯನ್ನು ನೀಡಿದ್ದು ವಿಶೇಷವಾಗಿತ್ತು.
ಆ್ಯಂಟಿ ಗ್ರಾವಿಟಿ ನೃತ್ಯವು ಬಹಳ ಸೋಗಸಾಗಿ ಮೂಡಿಬಂದಿತ್ತು. ಭೂಮಿಯ ಗುರುತ್ವಾಕರ್ಷಣೆ ಇಲ್ಲದಂತೆ ವೇದಿಕೆ ಮೇಲೆ ವಿವಿಧ ಭಂಗಿಗಳನ್ನು ಪ್ರದರ್ಶಿಸಿದ್ದು ಮನಮೋಹಕವಾಗಿತ್ತು .ಕೃಷ್ಣ ಕಾಳಿಂಗ ಸರ್ಪವನ್ನು ವಧೆ ಮಾಡಿದ ದೃಶ್ಯವಂತೂ ಅಮೋಘವಾಗಿತ್ತು.
ಕೈಯಲ್ಲಿ ದೀಪ ಹಿಡಿದುಕೊಂಡು ತಲೆಯ ಮೇಲೆ ಕುಂಭಹೊತ್ತು, ಕುಂಭಗಳ ಮೇಲೆನಿಂತು ವಿವಿಧ ರೀತಿಯ ಭಂಗಿಗಳನ್ನು ಪ್ರದರ್ಶಿಸಲಾಯಿತು. ಯಕ್ಷಗಾನದ ಜೊತೆ ಕಥಕ್ಕಳಿ, ಭರತ ನಾಟ್ಯ ಖುಷಿ ನೀಡಿದವು. ವೇದಿಕೆ ಮೇಲೆ ಚಿನ್ಮಯಿ ಭಟ್ ಹಾಡಿದ ‘ಸೋಜುಗಾದ ಸೂಜಿ ಮಲ್ಲಿಗೆ’ ಗೀತೆಯು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿತು.
ವರದಿ: ಐಶ್ವರ್ಯ ಕೋಣನ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಚಿತ್ರಗಳು: ಗ್ಲೆನ್ ಮೋನಿಸ್