ಕೊಲ್ಲೂರು: ಕರಾವಳಿ ಭಾಗದಲ್ಲಿ ಕಾಂಗ್ರೆಸ್ 10 ಸೀಟ್ ಗೆಲ್ಲುತ್ತದೆ. ಬಿಜೆಪಿಗೆ ಹಿಂದುತ್ವ ಫಲ ಕೊಡಲ್ಲ. ನಾವು ಬದುಕಿನ ಬಗ್ಗೆ ಮಾತನಾಡುತ್ತೇವೆ, ಅವರು ಭಾವನೆ ಬಗ್ಗೆ ಮಾತಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೊಲ್ಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೇ ಒಳ್ಳೆಯ ಕೆಲಸ, ಹೋರಾಟ, ಯುದ್ಧ ಮಾಡಬೇಕಾದರೆ ದೇವರ ಅನುಗ್ರಹ ಮುಖ್ಯ.ದೇವರ ಅನುಗ್ರಹ ಇಲ್ಲದೇ ಏನೂ ಆಗುವುದಿಲ್ಲ. ಕೊಲ್ಲೂರು ಮೂಕಾಂಬಿಕೆ, ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಬೇಕು ಅಂತ ಬಂದಿದ್ದೇನೆ ಎಂದರು.
ಜನರು ಕೇಸರಿಶಾಲು ಹಾಕಿ ಬಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು ಎಂಬುದು ಅವರ ಆಸೆ. ಮುಂದೆ ರಾಹುಲ್ ಗಾಂಧಿ ಜಿಲ್ಲೆಗೆ ಬರುತ್ತಾರೆ ಎಂದು ಹೇಳಿದರು.
ಸಿಎಂ ಹುದ್ದೆಗೆ ಕಾಂಗ್ರೆಸ್ ನಲ್ಲಿ ಪೈಪೋಟಿ ವಿಚಾರಕ್ಕೆ ಮಾತನಾಡಿದ ಅವರು, ನಾವು ರಾಜಕಾರಣಿಗಳು, ಖಾವಿ ಹಾಕ್ಕೊಂಡಿಲ್ಲ. ಬಿಳಿ ಬಟ್ಟೆ ಹಾಕ್ಕೊಂಡಿದ್ದೇವೆ ಎಂದರು.
ಸಿದ್ದರಾಮಯ್ಯ ಅವರ ಲಿಂಗಾಯತ ಭ್ರಷ್ಟ ಸಿಎಂ ಹೇಳಿಕೆ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂದಿದ್ದಾರೆ. ಯತ್ನಾಳ್, ಪ್ರತಾಪ್ ಸಿಂಹ, ನೆಹರೂ ಓಲೇಕಾರ್ ಅದನ್ನೇ ಹೇಳಿದ್ದಾರೆ. ಆದ್ರೆ, ಬಿಜೆಪಿ ಸುಮ್ಮನೆ ಈ ವಿಚಾರದಲ್ಲಿ ಸಮುದಾಯವನ್ನು ಎಳೆದು ತರುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.