ಕರಾವಳಿ: ಶ್ರೀ ಗಜನಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಡಾ ಸುರೇಶ್ ಚಿತ್ರಾಪು ಆಕ್ಷನ್ ಕಟ್ ಹೇಳಿ ಸಹ ನಿರ್ಮಾಣ ಮಾಡಿರುವ ಇಲ್ಲ್ ಒಕ್ಕೆಲ್ ತುಳು ಹಾಸ್ಯ ಸಿನಿಮಾದ ಟಕಿಲಾ ಟಕಿಲಾ ಹಾಡಿನ ವಿಡಿಯೋವನ್ನು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಬಿಡುಗಡೆಗೊಳಿಸಿದರು.
ಈ ಹಾಡು ಈಗ ಎಲ್ಲೆಡೆ ಜನಪ್ರಿಯವಾಗಿದೆ. ಈ ಹಾಡನ್ನು ಸಿನಿಮಾದ ನಿರ್ದೇಶಕ ಡಾ ಸುರೇಶ್ ಚಿತ್ರಾಪು ರಚಿಸಿದ್ದಾರೆ. ಅದೇ ರೀತಿ ಈ ಹಾಡನ್ನು ಬಾಲಿವುಡ್, ಟಾಲಿವುಡ್ ಖ್ಯಾತಿಯ ಹಾಡುಗಾರ ಟಿಪ್ಪು ಹಾಡಿದ್ದಾರೆ.
ಇಲ್ಲ್ ಒಕ್ಕೆಲ್ ಸಿನಿಮಾ ಅಕ್ಟೋಬರ್ ೨೧ ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಕೋಸ್ಟಲ್ ವುಡ್ ನ ಸ್ಟಾರ್ ಕಲಾವಿದರಾದ ಕುಸೇಲ್ದರಸೆ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ನವರಸ ರಾಜೆ ಭೋಜರಾಜ್ ವಾಮಂಜೂರ್ ಇಲ್ಲ್ ಒಕ್ಕೆಲ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ.
ಇದೊಂದು ಸಂಪೂರ್ಣ ಹಾಸ್ಯಮಯ ಹಾರರ್ ಚಿತ್ರವಾಗಿದ್ದು ಜೆ.ಎಸ್. ರಾಜಷ ಇದಕ್ಕೆ ಸಂಗೀತ ನೀಡಿದ್ದಾರೆ. ಟಿಪ್ಪು, ರಘು ದೀಕ್ಷಿತ್, ಮೈಮ್ ರಾಮ್ ದಾಸ್ ಅವರು ಹಾಡಿರುವ ಹಾಡುಗಳು ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತಿದೆ. ಚಿತ್ರಕ್ಕೆ ವಾಸುದೇವ್ ಎಸ್ ಚಿತ್ರಾಪು ಬಂಡವಾಳ ಹೂಡಿದ್ದಾರೆ. ಅದ್ವಿತಿ ಶೆಟ್ಟಿ ಈ ಚಿತ್ರದ ನಾಯಕಿ, ವಿ ಜೆ ವಿನೀತ್, ವಿಸ್ಮಯ ವಿನಾಯಕ್, ಉಮೇಶ್ ಮಿಜಾರು, ಸುನಿಲ್ ನೆಲ್ಲಿಗುಡ್ಡೆ, ಮೈಮ್ ರಾಮದಾಸ್, ರಾಜೇಶ್ ಪೂಜಾರಿ, ರಾದೇಶ್ ಶೆಣೈ , ಚಂದ್ರಕಲಾ ಮೋಹನ್, ರೂಪ ವರ್ಕಾಡಿ, ಯಕ್ಷಗಾನದ ಚಾರ್ಲಿ ಚಾಪ್ಲಿನ್ ಸೀತಾರಾಮ್ ಕಟೀಲ್ ಹಾಗೂ ನಿರೀಕ್ಷ ಶೆಟ್ಟಿ – ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕಥಾಹಂದರ
ಇಲ್ಲ್ ಒಕ್ಕೆಲ್ ಮನರಂಜನೆಯ ಪ್ರಯೋಗ ಮುಖ ಚಿತ್ರವಾಗಿದೆ. ಮನೆ ಕಟ್ಟಿ ಕೊಡುವಲ್ಲಿನ ಅವಸರದ ಸನ್ನಿವೇಶವನ್ನು ಹಿಡಿದುಕೊಂಡು ಅಲ್ಲಿ ನಡೆಯುವ ಕ್ವಾಮಿಡಿ ಅವಾಂತರಗಳನ್ನು ವಿಶೇಷವಾಗಿ ಇಟ್ಟುಕೊಂಡು ಚಿತ್ರಕತೆ ಹೆಣೆಯಲಾಗಿದೆ.
ಮತ್ತೊಂದು ಹಂತದಲ್ಲಿ ಚಿತ್ರವು ಹಾರರ್ ರೂಪ ಪಡೆಯಲಿದ್ದು, ಹಾರರ್ ಅನ್ನು ಪ್ರೇಕ್ಷಕರು ಹಾಸ್ಯಾತ್ಮಕವಾಗಿ ಎಂಜಾಯ್ ಮಾಡಬೇಕೆಂಬುದು ಚಿತ್ರತಂಡದ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ಇದೊಂದು ತುಳು ಸಿನಿಮಾರಂಗದಲ್ಲಿ ಹೊಸ ಪ್ರಯತ್ನ. ಹೀಗಾಗಿ ಪ್ರೇಕ್ಷಕರಲ್ಲಿ ಸಹಜವಾಗಿ ಕುತೂಹಲ, ಆಸಕ್ತಿ ಸೃಷ್ಟಿಸಿದೆ. ಮೇಸ್ತ್ರಿ, ಪೈಂಟರ್, ಪ್ಲಂಬರ್, ರೈಟರ್, ಇಂಜಿನಿಯರ್, ಕಾರ್ಪೆಂಟರ್ ಪಾತ್ರಗಳು ಇಲ್ಲಿ ಪ್ರೇಕ್ಷಕರನ್ನು ಗಮನ ಸೆಳೆಯಲಾಗಿದೆ.
ಹಾಸ್ಯ ಸಿನಿಮಾವಾದರೂ ಈ ಸಿನಿಮಾದ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಲಾಗಿದೆ ಎಂದು ಸಿನಿಮಾ ನಿರ್ದೇಶಕ ಡಾ. ಸುರೇಶ್ ಚಿತ್ರಾಪು ತಿಳಿಸಿದ್ದಾರೆ.