ಮಂಗಳೂರು: “ಸಿ.ಎ.ಪವರ್ 25-ಸೀಸನ್-4” ಇಂಟರ್-ಗ್ರೂಪ್2,ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮಾ ರ್ಚ್.೦5ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು. ಯುವಕರಲ್ಲಿ ಆತ್ಮವಿಶ್ವಾಸ ಬೆಳೆಸುವ, ಹಾಗೂ ಎಲ್ಲಾ ಆಸಕ್ತರಿಗೆ ಮುಕ್ತವಾಗಿರುವ, ವಿಶಿಷ್ಟ ರೀತಿಯ ತರಬೇತಿ ವಿಶ್ವ ಕೊಂಕಣಿ ಕೇಂದ್ರದ ಸಿ.ಎ. ಪವರ್ 25 ತರಬೇತಿ.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈಯವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿ, ವಿದ್ಯಾರ್ಥಿಗಳು ತಮ್ಮ ನಿರಂತರವಾದ ಛಲ ಸಾಧನೆ, ಧೃಢ ನಿರ್ಧಾರ, ಆತ್ಮವಿಶ್ವಾಸ ದಿಂದ ಮಾತ್ರ ತಮ್ಮ ಗುರಿ ಮುಟ್ಟಲು ಸ್ಸಾಧ್ಯ ಎಂದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕೆನರಾ ಛೇಂಬರ ಆಫ್ ಕಾಮರ್ಸ ಮತ್ತು ಇಂಡಸ್ಟ್ರಿ ಅಧ್ಯಕ್ಷರಾದ ಸಿ.ಎ. ಅನಂತೇಶ್ ವಿ. ಪ್ರಭು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಇಂತಹ ಉತ್ತಮ ಮಾರ್ಗದರ್ಶನವುಳ್ಳ ತಮ್ಮ ಗುರಿ ಸಾಧನೆಗೈಯಲು ಉಪಯುಕ್ತವಾದಂತಹ ಕಾರ್ಯಕ್ರಮವನ್ನು ಆಯೋಜಿಸಿದ ವಿಶ್ವ ಕೊಂಕಣಿ ಕೇಂದ್ರವನ್ನು ಶ್ಲಾಘಿಸುತ್ತಾ ಇದರ ಸದುಪಯೋಗವನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳು ತಮ್ಮ ನಿರಂತರವಾದ ಅಭ್ಯಾಸದಿಂದ ಗುರಿಸಾಧಿಸಿ ಜೀವನದಲ್ಲಿ ಜಯಶೀಲರಾಗಬೇಕು ಹಾಗೆಯೇ ಸಮಾಜ ಸೇವೆ ಮಾಡಲು ಯಾವತ್ತೂ ಸಿದ್ದರಾಗಿರಬೇಕು ಎಂದು ಶುಭ ಹಾರೈಸಿದರು.
ತ್ರಿಶಾ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಸ್ಥಾಪಕ ಹಾಗೂ ಮುಖ್ಯ ಆಡಳಿತ ಅಧಿಕಾರಿ ಸಿಎ ಗೋಪಾಲ ಕೃಷ್ಣ ಭಟ್ ಅವರು ಸಿ.ಎ. ಪರೀಕ್ಷೆಗಳನ್ನು ಎದುರಿಸಲು ಪರೀಕ್ಷಾರ್ಥಿಗಳಿಗೆ ಅವಶ್ಯಕವಾಗಿರುವ ಅಳವಡಿಸಬೇಕಾದ ಮೌಲ್ಯಗಳ ಬಗ್ಗೆ ಉಪಯುಕ್ತ ಸಲಹೆ ನೀಡಿ ಶುಭ ಹಾರೈಸಿದರು. ಉಪನ್ಯಾಸಕ ಸಿ.ಎ. ರಾಚೇಂದ್ರ ಮುಂಬಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ತ್ರಿಶಾ ಕ್ಲಾಸಸ್ ಅಕಾಡೆಮಿಕ್ ಮ್ಯಾನೇಜರ್ ಗೌರಿ ಕಾಮತ್ ವಿದ್ಯಾರ್ಥಿಗಳಿಗೆ ಮುಂದೆ ಅಣಕ ಪರೀಕ್ಷೆಗಳಿಗೆ ಹಾಜಾರಾಗುವ ಬಗ್ಗೆ ವಿವರಣೆ ನೀಡಿದರು.
ಹತ್ತು ದಿವಸಗಳ ಅವಧಿಯ ಈ ಉಚಿತ ಸನಿವಾಸೀ ತರಬೇತಿಯಲ್ಲಿ ಪರೀಕ್ಷಾರ್ಥಿಗಳಿಗೆ ಆಧುನಿಕ ಮಾದರಿಯಲ್ಲಿ ಸಂಪೂರ್ಣ ಪುನರಾವರ್ತನೆ ಹಾಗೂ ಅಣಕ ಪರೀಕ್ಷೆ ನೀಡಿ ಅಂತಿಮ ಮಟ್ಟಕ್ಕೆ ಸಿದ್ಧಗೊಳಿಸುವ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಸಿ.ಎ. ಪವರ್ 25 ಸೀಸನ್ -3 ಇಂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅವರೂ ಕೂಡಾ ತಮ್ಮ ಫಲಿತಾಂಶಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾ ಅನುಭವಗಳನ್ನು ಹಂಚಿಕೊಂಡರು. ಸಿ.ಎ. ಉಲ್ಲಾಸ್ ಕಾಮತ್ ರವರ ಯು.ಕೆ. ಆಂಡ್ ಕೊ ಮತ್ತು ತ್ರಿಶಾ ಕ್ಲಾಸಸ್ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಈ ತರಬೇತಿ ಯೋಜನೆಯ ಸಹಭಾಗಿಗಳಾಗಿರುತ್ತಾರೆ.
ಹಲವಾರು ಶಿಬಿರಾರ್ಥಿಗಳು ಅತೀಉತ್ಸಾಹದಿಂದ, ಆತ್ಮವಿಶ್ವಾಸದಿಂದ ಶಿಬಿರದಲ್ಲಿ ತಾವು ಪಡೆದ ಅನುಭವಗಳನ್ನು, ಜ್ನಾನವನ್ನು ಹಂಚಿಕೊಂಡರು. ವಿದ್ಯಾರ್ಥಿ ದೀಪ್ನಾ ಜೆ, ವೈಷ್ಣವಿ ಪ್ರಾರ್ಥಿಸಿದರು. ಇ ಜೆ ಸೃಜನಾ ಅತಿಥಿಗಳನ್ನು ಸ್ವಾಗತಿಸಿದರು, ವಿಜೇತ್ ಸಿಕ್ವೇರಾ ಕಾರ್ಯಕ್ರಮ ನಿರ್ವಹಿಸಿದರು. ಕೇಂದ್ರದ ಮುಖ್ಯ ಆಡಳಿತ ಅಧಿಕಾರಿ ಡಾ. ಬಿ. ದೇವದಾಸ್ ಪೈ ಧನ್ಯವಾದ ಸಮರ್ಪಣೆ ಮಾಡಿದರು.