ಲಿಂಗಸೂಗುರು: ತಾಲೂಕಿನ ಗುಡದನಾಳ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ಪತಿ ತನ್ನ ಪತ್ನಿಯ ಶೀಲ ಶಂಕಿಸಿ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ.
ರೇಣುಕಾ (26 ) ಕೊಲೆಯಾದ ಮಹಿಳೆ. ಜೆಟ್ಟೆಪ್ಪ ತನ್ನ ಹೆಂಡತಿಯನ್ನು ಕೊಲೆಗೈದ ಘಟನೆ ಇಂದು ಬೆಳಗ್ಗೆ ನಡೆದಿದೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಸಂಬುಡ ಗ್ರಾಮದ ರೇಣುಕಾಳ ಮದುವೆ 6-7 ವರ್ಷಗಳ ಹಿಂದೆ ನಡೆದಿತ್ತು. ಅದೇ ಗ್ರಾಮದ ಬೇರೆ ವ್ಯಕ್ತಿಯ ಜತೆ ಹೆಂಡತಿ ಪೋನ್ ನಲ್ಲಿ ಮಾತಾಡುತ್ತಿದ್ದಾಳೆ ಎಂದು ಗಂಡ ಶಂಕಿಸುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಮಂಗಳವಾರ ಸಂಜೆ ಕೂಡ ಇದೇ ವಿಚಾರವಾಗಿ ಜಗಳವಾಗಿತ್ತು.
ರೇಣುಕಾ ಇಂದು ಬೆಳಗ್ಗೆ ತವರು ಮನೆಗೆ ಹೋಗುತ್ತೇನೆಂದು ಹೇಳಿದ್ದಕ್ಕೆ ಗಂಡ ಕೊಡಲಿಯಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ನಂತರ ಜೆಟ್ಟಪ್ಪ ಮಕ್ಕಳೊಂದಿಗೆ ಲಿಂಗಸೂಗುರು ಠಾಣೆಗೆ ಬಂದು ಶರಣಾಗಿದ್ದಾನೆ.