ಬೆಳ್ತಂಗಡಿ: ಬ್ಯಾನರ್ ಕಟ್ಟುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಯುವಕನೋರ್ವ ಮೃತ ಪಟ್ಟ ಘಟನೆ ಮಂಗಳವಾರ ಸಂಜೆ ಇಲ್ಲಿನ ಬಸ್ ನಿಲ್ದಾಣ ಬಳಿ ನಡೆದಿದೆ. ಜತೆಯಲ್ಲಿದವರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ಪಟ್ಟವರನ್ನು ಬೆಳ್ತಂಗಡಿ ಕಸಬಾದ ಸಂಜಯನಗರ ನಿವಾಸಿ ಪ್ರಶಾಂತ್ ಆಚಾರ್ಯ (40) ಎಂದು ಗುರುತಿಸಲಾಗಿದೆ. ಮಲೆಬೆಟ್ಟು ನಿವಾಸಿ ಸತೀಶ್ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರ್ಯಕ್ರಮವೊಂದರ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ, ಆಘಾತದಿಂದ ಪ್ರಶಾಂತ್ ನೆಲಕ್ಕೆ ಬಿದ್ದಿದ್ದು ತಕ್ಷಣ ಬೆಳ್ತಂಗಡಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಪ್ರಶಾಂತ್ ರಿಕ್ಷಾ ಚಾಲಕನಾಗಿದ್ದು ಪತ್ನಿ, ಮೂರು ವರ್ಷದ ಮಗು, ಇಬ್ಬರು ಸಹೋದರಿಯರು,ಒರ್ವ ಸಹೋದರನನ್ನು ಅಗಲಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.