ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ತಡೆ ಉಂಟಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಚಾರ್ಮಾಡಿ ಘಾಟಿಯ 10 ನೇ ತಿರುವಿನಲ್ಲಿ ಇಂಧನ ತುಂಬಿದ ಟ್ಯಾಂಕರ್ ತಾಂತ್ರಿಕ ದೋಷದಿಂದ ಮಾರ್ಗ ಮಧ್ಯೆ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತಡೆಯುಂಟಾಯಿತು.ಇದರಿಂದ ಬೆಂಗಳೂರು ಸೇರಿಂತೆ ಇನ್ನಿತರ ಕಡೆಗಳಿಗೆ ಹೋಗುವ ಬಸ್ಸು ಹಾಗೂ ಇತರ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.
ಈ ಬಗ್ಗೆ ಮಾಹಿತಿ ಪಡೆದ ಹೊಯ್ಸಳದ ಪೊಲೀಸರು ಕೊಟ್ಟಿಗೆ ಹಾರ,ಚಾರ್ಮಾಡಿ ಗೇಟ್ ಬಳಿ ವಾಹನಗಳನ್ನು ನಿಯಂತ್ರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಂತರ ಕ್ರೇನ್ ತರಿಸಿ ಟ್ಯಾಂಕರ್ ತೆರವುಗೊಳಿಸಲಾಯಿತು. ಈಗಾಗಲೇ ಶಿರಾಡಿ, ಸಂಪಾಜೆಯಲ್ಲಿ ಮಾರ್ಗ ಕುಸಿತದಿಂದ ವಾಹನ ಸಂಚಾರಕ್ಕೆ ತಡೆಯಾಗಿರುವುದರಿಂದ ಹೆಚ್ಚಿನ ವಾಹನ ಸಂಚಾರ ಈ ರಸ್ತೆಯಲ್ಲಿಇದೆ.
ವಾಹನ ದಟ್ಟಣೆ ಹಾಗೂ ಅತೀ ಹೆಚ್ಚು ಬಸ್ಸುಗಳು ಸಂಚಾರಿಸುವುದರಿಂದ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುವಂತಾಯಿತು. ಸ್ಥಳದಲ್ಲಿ ಹೊಯ್ಸಳದ ವೆಂಕಪ್ಪ ಮತ್ತು ಬಸವರಾಜ್, ಸಂಚಾರಿ ಠಾಣೆಯ ಪಿಎಸ್ ಐ ಓಡಿಯಪ್ಪ, ಶಿವರಾಮ ರೈ,ಕುಮಾರ್ ಇದ್ದರು.
ರಾತ್ರಿ ಸಂಚಾರದ ಬಸ್ ಗಳು ಕೂಡ ಇದೆ ಮಾರ್ಗದಲ್ಲಿ ಸಂಚರಿಸುತ್ತಿವೆ. ಕೊಟ್ಟಿಗೆಹಾರದಲ್ಲಿ ಮಾಹಿತಿ ಪಡೆದ ಕೆಲವು ಬಸ್ ಗಳು ಶೃಂಗೇರಿ, ಎಸ್.ಕೆ. ಬಾರ್ಡರ್,ಬಜಗೋಳಿ ಮೂಲಕ ಸಂಚರಿಸಿದ ಬಗ್ಗೆ ತಿಳಿದು ಬಂದಿದೆ