ಬೆಳ್ತಂಗಡಿ: ಉಜಿರೆ ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಹಾಗೂ ಚರ್ಮಗಂಟು ರೋಗ ತಡೆಗಟ್ಟಲು ಲಸಿಕೆ ನೀಡುವ ಕಾರ್ಯಕ್ರಮ ಭಾನುವಾರ ಜರಗಿತು.
ಬೆಳ್ತಂಗಡಿ ಪಶುವೈದ್ಯಾಧಿಕಾರಿ (ಆಡಳಿತ) ಡಾ.ಮಂಜಾ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುರೇಶ್, ಹಿರಿಯ ಪಶು ವೈದ್ಯ ಪರೀಕ್ಷಕ ನಾಗಶಯನ ರಾವ್ ಮತ್ತು ತಂಡಗಳ ಸದಸ್ಯರು ಉಪಸ್ಥಿತರಿದ್ದರು.
ಒಟ್ಟು ಒಂಬತ್ತು ತಂಡಗಳಲ್ಲಿ ಗ್ರಾಮದ 795 ಜಾನುವಾರುಗಳಿಗೆ ಲಸಿಕೆ ನೀಡಲಾಯಿತು. ತಾಲೂಕಿನಲ್ಲಿ ಒಟ್ಟು 61 ಸಾವಿರ ಜಾನುವಾರುಗಳಿದ್ದು ಈಗಾಗಲೇ 29 ಸಾವಿರ ಲಸಿಕೆಗಳು ಪೂರೈಕೆಗೊಂಡು ಲಸಿಕೆ ಕಾರ್ಯಕ್ರಮ ಸಮಾರೋಪಾದಿಯಲ್ಲಿ ಜರುಗುತ್ತಿದೆ.
ಕಕ್ಕಿಂಜೆ,ತೋಟತ್ತಾಡಿ, ಚಿಬಿದ್ರೆ,ನೆರಿಯ ಮೊದಲಾದ ಕಡೆ ಲಸಿಕೆ ನೀಡುವ ಕಾರ್ಯಕ್ರಮ ಪೂರ್ಣಗೊಂಡಿದೆ. ಉಳಿದ ಗ್ರಾಮಗಳಲ್ಲಿ ಪಶು ಸಂಗೋಪನೆ ಇಲಾಖೆಯ ಹಲವಾರು ತಂಡಗಳು ಲಸಿಕೆ ನೀಡುವ ಕಾರ್ಯಕ್ರಮ ನಡೆಸುತ್ತಿವೆ.
ತಾಲೂಕಿನಲ್ಲಿ 335 ಚರ್ಮಗಂಟು ರೋಗ ಪ್ರಕರಣಗಳು ಕಂಡುಬಂದಿದ್ದು ಇದುವರೆಗೆ ಐದು ಹಸುಗಳು ಸಾವನ್ನಪ್ಪಿವೆ. ಇನ್ನು ಸುಮಾರು 30,000 ಕ್ಕಿಂತ ಅಧಿಕ ಸಂಖ್ಯೆಯ ಲಸಿಕೆಗಳ ಅಗತ್ಯವಿದ್ದು ಸದ್ಯವೇ ಪೂರೈಕೆಯಾಗಲಿದೆ. ಹೈನುಗಾರರು ಜಾನುವಾರುಗಳನ್ನು ತಮ್ಮ ಹಟ್ಟಿಗಳಲ್ಲಿ ಕಟ್ಟಿ ಹಾಕುವ ಮೂಲಕ ಲಸಿಕೆ ನೀಡುವ ತಂಡಗಳಿಗೆ ಸಹಕರಿಸುವಂತೆ ಬೆಳ್ತಂಗಡಿ ಪಶು ಆಸ್ಪತ್ರೆಯ ವೈದ್ಯಾಧಿಕಾರಿ (ಆಡಳಿತ) ಡಾ.ಮಂಜಾ ನಾಯ್ಕ್ ಮನವಿ ಮಾಡಿದ್ದಾರೆ.