ಉಡುಪಿ: ಲಯನ್ಸ್ ಕ್ಲಬ್ ಮೂಡುಬೆಳ್ಳೆ ಇದರ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಕಾರ್ಯಕ್ರಮವು ಡಿ.15 ರಂದು ಸಂಜೆ 6 ಗಂಟೆಗೆ ಮೂಡುಬೆಳ್ಳೆ ಲಯನ್ಸ್ ಸೇವಾಭವನದಲ್ಲಿ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಮೂಡುಬೆಳ್ಳೆ ಇದರ ಕಾರ್ಯದರ್ಶಿ ದೇವದಾಸ ಹೆಬ್ಬಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಜಿಲ್ಲೆ 1317ಸಿ ಯ ಗವರ್ನರ್ ಡಾ. ಎಂ. ಕೆ. ಭಟ್, ಉಡುಪಿ ಧರ್ಮ ಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ, ಚಿಕಾಗೊ ಲಯನ್ಸ್ ಜಿಲ್ಲೆಯ ಆಸ್ಟಿನ್ ಪ್ರಭು, ಜಿಲ್ಲಾ ಉಪ ಗವರ್ನರ್ ಗಳಾದ ನೇರಿ ಕರ್ನೇಲಿಯೋ, ಮಹಮ್ಮದ್ ಹನೀಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಲಯನ್ಸ್ ಕ್ಲಬ್ 25 ವರ್ಷಗಳ ಸೇವಾ ಪಯಣದಲ್ಲಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪದ್ಮ ವಿಭೂಷಣ ಡಾ. ಬಿ.ಎಂ. ಹೆಗ್ಡೆ ಕೊಡಮಾಡಿದ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಮೂಡುಬೆಳ್ಳೆ ಪರಿಸರದ ಸುಮಾರು 120 ಕುಟುಂಬಗಳಿಗೆ ಉಚಿತ ಶೌಚಾಲಯವನ್ನು ಲಯನ್ಸ್ ಕ್ಲಬ್ ಮೂಡುಬೆಳ್ಳೆ ಮೂಲಕ ನಿರ್ಮಿಸಿದೆ. ಸೂರು ಇಲ್ಲದ ಸುಮಾರು 14 ಕುಟುಂಬಗಳಿಗೆ ಮನೆ ನಿರ್ಮಾಣ ಮತ್ತು ದುರಸ್ತಿ ಕಾರ್ಯ ಮಾಡಿದೆ. 10 ಬಸ್ಸು ತಂಗುದಾಣ, ಟ್ರಾಫಿಕ್ ಫಲಕ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿರಂತರ ಸಹಾಯಧನ, ಶಾಲಾ ಬಿಸಿಯೂಟದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಮಳೆನೀರು ಕೊಯ್ಲು ಮುಂತಾದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.
ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ 40 ಸೀಟುಗಳ ಶಾಲಾವಾಹನವನ್ನು ಮೂಡುಬೆಳ್ಳೆಯ ಸಂತ ಲಾರೆನ್ಸ್ ಶಿಕ್ಷಣ ಸಂಸ್ಥೆಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಕಮಡೋರ್ ಕಸ್ತಲಿನೋ, ಪ್ರಾಂತೀಯ ಅಧ್ಯಕ್ಷ ಎಲಿಯಾಸ್ ಡಿಸೋಜ, ಎವ್ಜಿನ್ ಡಿಸೋಜ ಉಪಸ್ಥಿತರಿದ್ದರು.