ಬೆಳ್ತಂಗಡಿ: ಸಂಘ ಸಂಸ್ಥೆಗಳೆಂದರೆ ಒಳ್ಳೆಯ ಮನಸ್ಸುಳ್ಳ ಜನರ ಕೂಡುವಿಕೆ. ಸಂಘಗಳನ್ನು ಹುಟ್ಟು ಹಾಕುವಾಗ ಕೆಲವೊಮ್ಮೆ ಅಪಹಾಸ್ಯವು ಸಹಜ, ಆದರೆ ನಮ್ಮ ಸಾಧನೆಗಳನ್ನು ಹಂಚಿಕೊಳ್ಳಲು ಹಾಗೂ ಕಷ್ಟಗಳು ಬಂದಾಗ ಸಾಂತ್ವನದ ಜತೆ ಸಹಕಾರ ನೀಡಲು ಇವುಗಳ ಅಗತ್ಯವಿದೆ. ಸಹಕಾರದ ಬಲದಿಂದ ನೀಡುವ ಸಹಾಯವೇ ಅತ್ಯಂತ ದೊಡ್ಡ ಸೇವೆ ಎಂದು ಉಜಿರೆ ವರ್ತಕರ ಸಂಘದ ಕಾನೂನು ಸಲಹೆಗಾರ ಬಿ.ಕೆ.ಧನಂಜಯರಾವ್ ಹೇಳಿದರು.
ಅವರು ಮಂಗಳವಾರ ಉಜಿರೆಯ ಶ್ರೀ ರಾಮಕೃಷ್ಣ ಸಭಾಭವನದಲ್ಲಿ, ಇತ್ತೀಚೆಗೆ ಉಜಿರೆಯಲ್ಲಿ ಬೆಂಕಿ ಅನಾಹುತದಿಂದ ನಷ್ಟ ಉಂಟಾದ ಉದ್ಯಮಿಗಳಿಗೆ ಉಜಿರೆ ವರ್ತಕರ ಸಂಘದ ವತಿಯಿಂದ ನಡೆದ ಪರಿಹಾರ ನಿಧಿ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ ಪರಸ್ಪರ ಸಹಾಯವು ಭಾವನಾತ್ಮಕತೆಯನ್ನು ತೋರಿಸಿಕೊಡುತ್ತದೆ. ಮಾನಸಿಕವಾಗಿ ನೀಡುವ ಧೈರ್ಯ ಸಂಕಷ್ಟ ಕ್ಕೊಳಗಾದವರಿಗೆ ಸಹಾಯವಾಗುತ್ತದೆ. ಅನಾಹುತಗಳು ಉಂಟಾದಾಗ ಸಂಭವಿಸುವ ನಷ್ಟಕ್ಕೆ ಪರಿಹಾರ ಪಡೆಯಲು ವಿಮೆಗಳ ಕುರಿತು ಮಾಹಿತಿ ಕಾರ್ಯಾಗಾರಗಳನ್ನು ನಡೆಸುವ ಅಗತ್ಯವಿದೆ ಎಂದರು.
ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಗ್ರಾಪಂ ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಹಿರಿಯ ವರ್ತಕರಾದ ರಿಚರ್ಡ್ ಸಾಲ್ಡಾನ,ಪದ್ಮನಾಭ ಶೆಟ್ಟಿಗಾರ್, ಭರತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಜತೆ ಕಾರ್ಯದರ್ಶಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಬೆಂಕಿ ಅನಾಹುತದಿಂದ ನಷ್ಟ ಅನುಭವಿಸಿದ ನಾಗೇಶ್ ಭಟ್, ರಾಜೀವ,ಯೋಗೀಶ್ ಕುಮಾರ್, ರಾಮಣ್ಣ ಹಾಗು ವಸಂತ ಅವರಿಗೆ ವರ್ತಕರ ಸಂಘದ ಮೂಲಕ ಸಂಗ್ರಹಿಸಿದ ರೂ. 3,10,012 ಮೊತ್ತವನ್ನು ಚೆಕ್ ಮೂಲಕ ಹಸ್ತಾಂತರಿಸಲಾಯಿತು.
ಮರು ನಿರ್ಮಾಣ
ಆ. 31ರಂದು ಅನುಗ್ರಹ ಶಾಲೆಯ ಬಳಿ ಉಂಟಾದ ಅಗ್ನಿ ಅನಾಹುತದಿಂದ ರಕ್ಷಾ ಟ್ರೇಡರ್ಸ್ ಹಾಗೂ ಅನಾರ್ ಟಯರಾ ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿವೆ.ಈ ಅಂಗಡಿಗಳ ಎಲ್ಲಾ ಸುತ್ತುಗಳ ಸಹಿತ ಕಟ್ಟಡ ಕೂಡ ಬೆಂಕಿಯಿಂದ ನಾಶವಾಗಿದ್ದು ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಇದೀಗ ಈ ಅಂಗಡಿಗಳನ್ನು ಕಟ್ಟಡ ಸಹಿತ ಮರು ನಿರ್ಮಿಸುವ ಕೆಲಸ ಆರಂಭವಾಗಿದೆ. ಸೆ. 20 ರಂದು ಉಜಿರೆಯ ಚಾರ್ಮಾಡಿ ರಸ್ತೆಯ ಸಮೀಪದ ಉಂಟಾದ ಬೆಂಕಿ ದುರಂತದಲ್ಲಿ ಹಾನಿಗೀಡಾದ ಅಂಗಡಿಗಳು ಮರುವ್ಯವಹಾರ ನಡೆಸಲು ತಯಾರಿ ನಡೆಸುತ್ತಿವೆ.