ಬೆಳ್ತಂಗಡಿ: ನಿಡ್ಲೆ ಸರಕಾರಿ ಪ್ರೌಢ ಶಾಲೆಯಲ್ಲಿ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಅವರು ನೆರವೆರಿಸಿ ಮಾತನಾಡುತ್ತಾ ಸರಕಾರಿ ಅಧಿಕಾರಿಗಳು ಜನರಬಳಿಗೆ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ರಮ ಇದಾಗಿದ್ದು ಸರಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಹಾಗೂ ಸೌಲಭ್ಯಗಳನ್ನು ಪಡೆಯಲು ಇದು ಸಹಕಾರಿಯಾಗಿದೆ ಎಂದರು.
ಸಭೆಯಲ್ಲಿ ಗ್ರಾಮಸ್ಥರು ಗ್ರಾಮದಲ್ಲಿರುವ ಅರಣ್ಯ ಹಾಗೂ ಕಂದಾಯಿಲಾಖೆಯ ನಡುವಿನ ಜಮೀನು ಗಡಿ ಗುರುತಿನ ಸಾಮಸ್ಯೆಯಿಂದಾಗಿ ಅಕ್ರಮ ಸಕ್ರಮ 94,ಸಿ ಸೇರಿದಂತೆ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಿರುವ ಜನ ಹಲವು ವರ್ಷಗಳಿಂದ ನಿರಂತರವಾಗಿ ಅಲೆದಾಡುತ್ತುದ್ದಾರೆ ಇದಕ್ಕೆ ಪರಿಹಾರ ಕಾಣಬೇಕು ಎಂದು ಜನರು ಒತ್ತಾಯಿಸಿದರು. ಈಬಗ್ಗೆ ಉತ್ತರಿಸಿದ ಅಧಿಕಾರಿಗಳು ಈಗಾಗಲೆ ರೆಖ್ಯದಲ್ಲಿ ಸಮಸ್ಯೆಯನ್ನು ಪರಿಹರಿಸಲಾಗಿದ್ದು ಕಳೆಂಜದಲ್ಲಿ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು ಬಳಿಕ ನಿಡ್ಲೆ ಗ್ರಾಮ ಪಂಚಾಯತಿನಲ್ಲಿ ಇದನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕು ಕಚೇರಿಗೆ ಬಂದರೆ ಎಲ್ಲಾ ದಾಖಲೆಗಳು ಒಂದೇ ಕಡೆ ಲಭಿಸುವಂತೆ ಮಾಡಬೇಕು ಬೇರೆ ಬೇರೆ ದಾಖಲೆಗಳಿಗಾಗಿ ಬೇರೆ ಬೇರೆ ಕಡೆ ಅಲೆದಾಡಬೇಕಾದ ಸ್ಥಿತಿ ಬಂದಿದೆ ಇದನ್ನು ಸರಿಪಡಿಸುವಂತೆ ಜನ ಒತ್ತಾಯಿಸಿದರು. ಗ್ರಾಮದಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಹೆಬ್ಬಾರ್ ವಹಿಸಿದ್ದರು. ತಾಲೂಕು ಪಂಚಾಯತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ನಿಡ್ಲೆ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಶ್ಯಾಮಲಾ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ತಾಲೂಕು ಪಶು ವೈಧ್ಯಾಧಿಕಾರಿ ಡಾ.ಪ್ರಕಾಶ್, ಕೃಷಿ ಅಧಿಕಾರಿ ಹೂಗಾರ್, ಸಿಡಿಪಿಒ ಪ್ರಿಯಾ ಆಗ್ನೆಸ್, ಪಶುಸಂಗೋಪನಾ ಅಧಿಕಾರಿ ಜಯಕೀರ್ತಿ ಜೈನ್,ಸಮಾಜಕಲ್ಯಾಣ ಇಲಾಖೆಯ ಹೇಮಲತಾ,ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ರವಿ ಸ್ವಾಗತಿಸಿದರು. ಹೇಮಲತಾ ವಂದಿಸಿದರು.