ಬೆಳ್ತಂಗಡಿ : ‘ಯಕ್ಷಗಾನ ಕ್ಷೇತ್ರದಲ್ಲಿ ಹಾಸ್ಯಗಾರರಾಗಿ ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ನೂರಾರು ಪಾತ್ರಗಳನ್ನು ತನ್ನ ಅಭಿನಯ ಮತ್ತು ಮಾತುಗಾರಿಕೆಯಿಂದ ವಿಶಿಷ್ಟರಾಗಿ ನಿರ್ವಹಿಸಿ ಖ್ಯಾತರಾದ ವೇಣೂರು ಸುಂದರ ಆಚಾರ್ಯರ ಪ್ರಥಮ ಸಂಸ್ಮರಣ ಕಾರ್ಯಕ್ರಮ ಜು. 10 ರಂದು ವೇಣೂರಿನ ಭರತೇಶ ಸಭಾಭವನದಲ್ಲಿ ರಸಋಷಿ ಅರ್ಕುಳ ಸುಬ್ರಾಯ ಆಚಾರ್ಯ ವೇದಿಕೆಯಲ್ಲಿ ನಡೆಯಲಿದೆ’ ಎಂದು ವೇಣೂರು ಸುಂದರ ಆಚಾರ್ಯ ಸಂಸ್ಮರಣಾ ಸಮಿತಿ ಕಾಂಜರಕಟ್ಟೆ, ವೇಣೂರು ಇದರ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ಹೇಳಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸಿದ್ಧ ಕಲಾವಿದರ ಭಾಗವಹಿಸುವಿಕೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ‘ಕರ್ಣಾರ್ಜುನ’ ಸಂಜೆ 5 ರಿಂದ ‘ ವಾಲಿಮೋಕ್ಷ ‘ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 4 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುಂದರ ಆಚಾರ್ಯರ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ನುಡಿ ನಮನ ಕಾರ್ಯಕ್ರಮ ನಡೆಯಲಿದೆ . ರಾಜ್ಯ ಪ್ರಶಸ್ತಿ ವಿಜೇತ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದ ಶಿವರಾಮ ಜೋಗಿ ಅವರಿಗೆ ಪ್ರಥಮ ಸಂಸ್ಕರಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವೇಣೂರು ಸುಂದರ ಆಚಾರ್ಯರ ಕಿರಿಯ ಪುತ್ರ ಭಾಸ್ಕರ ಆಚಾರ್ಯರಿಗೆ ಮತ್ತು ಪ್ರತಿಭಾವಂತ ಕಲಾವಿದರಾಗಿದ್ದ ವಾಮನ ಕುಮಾರ್ ಇವರಿಗೆ ನುಡಿ ನಮನವನ್ನು ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಸಲ್ಲಿಸಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಶ್ರೀ ಕಾಳಿಕಾಂಭ ವಿನಾಯಕ ದೇವಸ್ಥಾನದ ಎರಡನೇ ಮೊಕ್ತೇಸರ ಬೆಳುವಾಯಿ ಸುಂದರ ಆಚಾರ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜಾ, ಉದ್ಯಮಿ ಶ್ರೀಪತಿ ಭಟ್ ಭಾಗವಹಿಸಲಿದ್ದಾರೆ. ವೇಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನೇಮಯ್ಯ ಕುಲಾಲ್, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಪುರುಷೋತ್ತಮ ರಾವ್, ಉದ್ಯಮಿ ಭಾಸ್ಕರ ರೈ, ಸಂಸ್ಮರಣಾ ಸಮಿತಿ ಅಧ್ಯಕ್ಷ ಶ್ರೀಧರ ಆಚಾರ್ಯ ಖಂಡಿಗ ಉಪಸ್ಥಿತರಿರುವರು ಎಂದು ಹೇಳಿದರು.
ಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ರವೀಂದ್ರ ಆಚಾರ್ಯ ವೇಣೂರು, ಉಪಾಧ್ಯಕ್ಷ ಸದಾಶಿವ ಕುಲಾಲ್, ಪದಾಧಿಕಾರಿಗಳಾದ ಸದಾನಂದ ಎಸ್ ಆಚಾರ್ಯ ನೂರಾಳ್ ಬೆಟ್ಟು, ಸತೀಶ್ಚಂದ್ರ ಆಚಾರ್ಯ ಇದ್ದರು.