ಬೆಳ್ತಂಗಡಿ: ನಿರ್ಮಲ ಮನಸ್ಸು ಮತ್ತು ಸಾತ್ವಿಕವಾದ ದೈವೀ ಗುಣಗಳು ಯಾರಲ್ಲಿ ಇದೆಯೋ ಅಂತವರನ್ನು ಪೂಜಿಸುವ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿ ಆಗಿದೆ. ರಥ ಸಮವಸರಣದ ಪ್ರತೀಕವಾಗಿದ್ದು, ಭಗವಂತ ಕೂತಿರುವ ರಥವನ್ನು ಅತ್ಯಂತ ಗಂಭೀರ ಹಾಗೂ ಶ್ರದ್ಧಾಭಕ್ತಿಯಿಂದ ಎಳೆಯಬೇಕು ಎಂದು ಮೂಡಬಿದಿರೆ ಜೈನಮಠದ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ನುಡಿದರು.
ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ, ಶ್ರೀ ಬಾಹುಬಲಿ ಯುವಜನ ಸಂಘ, ಭಾರತೀಯ ಜೈನ್ ಮಿಲನ್, ಶ್ರೀ ಬ್ರಾಹ್ಮೀ ಮಹಿಳಾ ಸಂಘದ ಆಶ್ರಯದಲ್ಲಿ ವೇಣೂರು ಶ್ರೀ ಭಗವಾನ್ ಬಾಹುಬಲಿ ಸ್ವಾಮಿಯ ರಥಾಯಾತ್ರಾ ಮಹೋತ್ಸವದ ಧಾರ್ಮಿಕಸಭೆಯಲ್ಲಿ ಅವರು ಅಶೀರ್ವಚನ ನೀಡಿದರು.
ಮುನಿಶ್ರೀ ೧೦೮ ಪ್ರಸಂಗಸಾಗರ್ಜಿ ಮಹಾರಾಜ್ ಮಂಗಲ ಪ್ರಚವನ ನೀಡಿದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ೨೦೨೪ರಲ್ಲಿ ಜರಗಲಿರುವ ಮಹಾಮಸ್ತಕಾಭಿಷೇಕದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು. ಕ್ಷೇತ್ರದ ಆವರಣಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಇಂಟರ್ಲಾಕ್ಸ್ ಅಳವಡಿಸಲಾಗಿದ್ದು, ಅದರ ಉದ್ಘಾಟನೆಯನ್ನು ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನೆರವೇರಿಸಿದರು. ಬೆಳಗ್ಗೆ ಕ್ಷೇತ್ರದಲ್ಲಿ ಕುಂಕುಮೋತ್ಸವ, ಧ್ವಜಾರೋಹಣ ಜರಗಿತು.
ಸಮ್ಮಾನ-ಪ್ರತಿಭಾ ಪುರಸ್ಕಾರ
ಶಾಸಕ ಹರೀಶ್ ಪೂಂಜ, ಮಟ್ಟಾರು ರತ್ನಾಕರ ಹೆಗ್ಡೆ, ವಿಶ್ವಾಸ್ ಜೈನ್ ಬಾಲ್ನಗುತ್ತು, ಗಿರೀಶ್ ಕೆ.ಎಸ್. ಹಾಗೂ ನೇಮಯ್ಯ ಕುಲಾಲ್ ಅವರನ್ನು ಸಮ್ಮಾನಿಸಲಾಯಿತು. ದಿ. ಡಾ| ಪಿ. ಅಂತಪ್ಪ ಆಳ್ವರವರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳಿಂದ, ಬಡಕೋಡಿ ದಿ| ಪಿ. ಆದಿರಾಜ ಶೆಟ್ಟಿಯವರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳಿಂದ ಎಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ಜೈನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ನಿಧಿ ಜೈನ್ ಪ್ರಾರ್ಥಿಸಿ, ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಪ್ರವೀಣ್ಕುಮಾರ್ ಇಂದ್ರ ಸ್ವಾಗತಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ನಿರೂಪಿಸಿ, ಬಾಹುಬಲಿ ಯುವಜನ ಸಂಘದ ಸಂಘಟನಾ ಕಾರ್ಯದರ್ಶಿ ಬಿ. ಸುಧೀರ್ ಕುಮಾರ್ ವಂದಿಸಿದರು.