ಬೆಳ್ತಂಗಡಿ: ಇತ್ತೀಚೆಗೆ ಬೆಳ್ತಂಗಡಿಯ ಸಮಾರಂಭವೊಂದರಲ್ಲಿ ವಸತಿ ಸಚಿವ ವಿ. ಸೋಮಣ್ಣ ಅವರು ಬೆಳ್ತಂಗಡಿ ತಾಲೂಕಿನಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಂದು ವಾರದಲ್ಲಿ ಡಿ.ಪಿ.ಆರ್ ಮಾಡುವುದಾಗಿ ಘೋಷಿಸಿದ್ದ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮಂಗಳವಾರ ಜಾಗ ಗುರುತಿಸುವಿಕೆ ಕಾರ್ಯ ನಡೆಸಿದರು.
ಧರ್ಮಸ್ಥಳ ಹಾಗೂ ಲಾಯಿಲ ಗ್ರಾಮದಲ್ಲಿ ಸ್ಥಳ ಪರಿಶೀಲನೆ ಕಾರ್ಯ ನಡೆದಿದ್ದು ಬೆಳ್ತಂಗಡಿಯ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಸಮೀಪದ ಲಾಯಿಲ ಹಾಗೂ ಮೇಲಂತಬೆಟ್ಟು ಗಡಿ ಭಾಗಗಳಲ್ಲಿ ಅಧಿಕಾರಿಗಳು ಸ್ಥಳ ವೀಕ್ಷಣೆಯನ್ನು ಮಾಡಿದ್ದಾರೆ.
ವಿಮಾನ ನಿಲ್ದಾಣಕ್ಕೆ 100 ಎಕರೆಯಷ್ಟು ಜಾಗ ಬೇಕಾಗಿದ್ದು ಅದರ ಸುತ್ತಮುತ್ತ ಬೆಟ್ಟ ಗುಡ್ಡಗಳು ಅಡ್ಡ ಬಾರದಂತೆ ಜಾಗ ಗುರುತಿಸಬೇಕಾಗಿರುವುದರಿಂದ ಈ ಪ್ರದೇಶದಲ್ಲೂ ವೀಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದರ ವಿವರಗಳನ್ನು ಸಂಬಂಧ ಪಟ್ಟ ಇಲಾಖೆಗೆ ವರದಿ ಮಾಡಲಾಗುತ್ತದೆ.
ಪರಿಶೀಲನೆಯ ಸಂದರ್ಭದಲ್ಲಿ ,ಪೂರ್ವಿ ಮಠ್ ನೇತೃತ್ವದ ಬೆಂಗಳೂರಿನ ಕೆ.ಎಸ್.ಐ.ಐ.ಡಿ.ಸಿ ತಾಂತ್ರಿಕ ವಿಭಾಗದ ಅಧಿಕಾರಿಗಳು , ಪುತ್ತೂರು ಸಹಾಯಕ ಆಯುಕ್ತರಾದ ಗಿರಿನಂದನ್, ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಮ್ , ಕಂದಾಯ ನಿರೀಕ್ಷಕ ಪ್ರತೀಶ್, ಸೇರಿದಂತೆ , ಲಾಯಿಲ ಗ್ರಾಮ ಲೆಕ್ಕಿಗರಾದ ರೆನಿತಾ, ಗ್ರಾಮ ಸಹಾಯಕ ಸತೀಶ್ ಇದ್ದರು.