ಬೆಳ್ತಂಗಡಿ: ತಾಲೂಕಿನ ಕನ್ಯಾಡಿಯ ಸೇವಾ ಭಾರತಿ ಸಂಸ್ಥೆ ಕರ್ನಾಟಕ ರಾಜ್ಯ ಸರಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೀಡುವ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ.
ಡಿ ೩. ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿನಡೆದ ವಿಶ್ವ ವಿಶೇಷಚೇತನ ದಿನಾಚರಣೆಯ ಸಂದರ್ಭ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ವಿಕಲಚೇತನ ಇಲಾಖೆಯ ಸಚಿವ ಹಾಲಪ್ಪ ಆಚಾರ್ ಉಪಸ್ಥಿತಿಯಲ್ಲಿ ಕನ್ಯಾಡಿ ಸೇವಾಭಾರತಿ ಯ ಅಧ್ಯಕ್ಷ ಕೆ.ವಿನಾಯಕ ರಾವ್ ಪ್ರಶಸ್ತಿ ಸ್ವೀಕರಿಸಿದರು. ಸಂಸ್ಥೆಯ ಕಾರ್ಯದರ್ಶಿ ಸ್ವರ್ಣಗೌರಿ,ಸಿಬಂದಿ,ಹಿರಿಯ ಪ್ರಬಂಧಕ ಚರಣ್ ಎಂ ,ಸಲಹಾ ಸಮಿತಿ ಸದಸ್ಯ ಹರೀಶ್ ಟಿ.ಪಿ,ಸಂಸ್ಥೆಯ ಪೋಷಕ ಕೆ.ವಿವೇಕ್ ರಾವ್ ಜತೆಗಿದ್ದರು.
ಸೇವಾಭಾರತಿ(ರಿ) 2004ರಲ್ಲಿ ಕನ್ಯಾಡಿಯಲ್ಲಿ ಕೆ. ವಿನಾಯಕ ರಾವ್ ಸ್ಥಾಪಿಸಿದ ಸರಕಾರೇತರ ಸಂಸ್ಥೆಯಾಗಿದ್ದು ಕಳೆದ 18 ವರ್ಷಗಳಿಂದ ಆರೋಗ್ಯ, ಮಹಿಳಾ ಸಬಲೀಕರಣ ಸ್ವ-ಉದ್ಯೋಗದ ಮೂಲಕ ದಿವ್ಯಾಂಗರ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವಾಕಾರ್ಯ ಹಾಗೂ ಸಮುದಾಯ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತದೆ. ಇದುವರೆಗೆ ಸುಮಾರು ಐನೂರಕ್ಕೂ ಹೆಚ್ಚು ಬೆನ್ನು ಮೂಳೆ ಮುರಿತಕ್ಕೊಳಗಾದವರನ್ನು ಗುರುತಿಸಿ,150 ಮಂದಿಗೆ ಪುನಶ್ಚೇತನವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿರುವ ಇನ್ನೂ ಅನೇಕ ಬೆನ್ನು ಮೂಳೆ ಮುರಿತಕ್ಕೊಳಗಾದವರನ್ನು ಗುರುತಿಸುವ ಕಾರ್ಯ ಸಂಸ್ಥೆಯಿಂದ ನಿರಂತರವಾಗಿ ನಡೆಯುತ್ತಿದೆ.
ಸೇವಾಭಾರತಿಯ ಘಟಕವಾಗಿ 2018ರಿಂದ ಬೆನ್ನುಹುರಿ ಮುರಿತಕ್ಕೊಳಗಾದ ದಿವ್ಯಾಂಗರಿಗಾಗಿ “ಸೇವಾಧಾಮ “ಹೆಸರಿನ ಪುನಃಶ್ಚೇತನ ಕೇಂದ್ರವು ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ಟ್ರಸ್ಟ್ ನೀಡಿದ ಬಾಡಿಗೆ ರಹಿತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸೇವಾಧಾಮವು, ಸೇವಾಭಾರತಿ ಸ್ವಯಂ ಸೇವಾ ಸಂಸ್ಥೆಯ ಘಟಕವಾಗಿದ್ದು ಬೆನ್ನುಹುರಿ ಅಪಘಾತಕ್ಕೊಳಗಾಗಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಅಪಘಾತಕ್ಕೊಳಗಾದವರ ಆಶಾಕೇಂದ್ರವಾಗಿದೆ. ಇಲ್ಲಿಯ ಸೇವೆಯು ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಅಪಘಾತದ ನಂತರದ ಗಂಭೀರ ತೊಡಕುಗಳನ್ನು ಕಡಿಮೆ ಮಾಡಿ, ಅವರಲ್ಲಿ ಚಲನಶೀಲತೆಯನ್ನು ಹೆಚ್ಚಿಸಿ, ಆತ್ಮವಿಶ್ವಾಸ ಮೂಡಿಸಿ,ದೀರ್ಘಾವಧಿಯಲ್ಲಿ ಜೀವನೋಪಾಯ ದ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೇಪಿಸುತ್ತದೆ.ಅಪಘಾತಕ್ಕೊಳಗಾಗಿ ಚಲನಶೀಲತೆ, ಆತ್ಮವಿಶ್ವಾಸ ಕಳೆದುಕೊಂಡು,ಮಾನಸಿಕ ಖಿನ್ನತೆಗೊಳಗಾಗಿ
ಆರ್ಥಿಕ ಸಂಕಷ್ಟದಲ್ಲಿರುವ ದಿವ್ಯಾಂಗರನ್ನು ಪುನಃಶ್ಚೇತನಗೊಳಿಸುವ ಮೂಲಕ ಅವರ ಕುಟುಂಬಕ್ಕೆ ಸಾಂತ್ವನ ನೀಡಿ, ಸ್ವಾವಲಂಬನೆಯ ಹಾದಿಯಲ್ಲಿ ತರಬೇತಿ ನೀಡುವ ಮೂಲಕ ಸಾಮಾಜಿಕ ಬಧ್ಧತೆಯನ್ನು ಕಲ್ಪಿಸುತ್ತಿದೆ .
ಸೇವಾಧಾಮದ ಸೇವಾಕಾರ್ಯ ಚಟುವಟಿಕೆಯನ್ನು ದ.ಕ., ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು,ಕಾಸರಗೋಡು,ಕೊಡಗು,.ನೆರೆಯ ಜಿಲ್ಲೆಗಳಿಗೂ ವಿಸ್ತರಿಸಿ,ಆ ಭಾಗದ ಬೆನ್ನುಮೂಳೆಮುರಿತಕ್ಕೊಳಗಾದವರನ್ನು ಗುರುತಿಸಿ, ಅವರಿಗೆ ಇಲಾಖೆ ವತಿಯಿಂದ ಗುರುತು ಚೀಟಿ ದೊರಕಿಸಿ, ಸರಕಾರದ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ.