ಬೆಳ್ತಂಗಡಿ: ಶನಿವಾರ ತಾಲೂಕಿನಲ್ಲಿ ಉತ್ತಮ ಮಳೆ ಸುರಿದಿದೆ. ಮಳೆ ಪರಿಣಾಮ ಹೆದ್ದಾರಿ ಉಜಿರೆಯ ಕೆಳಗಿನ ಪೆಟ್ರೋಲ್ ಬಂಕ್ ಬಳಿ ಮಳೆ ನೀರು ರಸ್ತೆಯಲ್ಲೇ ಹರಿದು ವಾಹನ ಸವಾರರು, ಪಾದಚಾರಿಗಳು, ಶಾಲಾ ಮಕ್ಕಳು ಪರದಾಟ ನಡೆಸಿದರು.
ಇಲ್ಲಿ ಕಳೆದ ವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಚರಂಡಿ ಯನ್ನ ತಾತ್ಕಾಲಿಕ ದುರಸ್ತಿ ಪಡಿಸಿದ್ದರು ಮತ್ತೆ ಸಮಸ್ಯೆ ಉಲ್ಬಣಿಸಿದೆ. ಉಜಿರೆ ಯಿಂದ ಚಾರ್ಮಾಡಿ ತನಕದ ಸುಮಾರು 20ಕಿಮೀ ಹೆದ್ದಾರಿ ವ್ಯಾಪ್ತಿಯ ರಸ್ತೆ ಹಾಗೂ ಪೇಟೆಗಳಲ್ಲಿ ಮಳೆ ನೀರು ಸಮಸ್ಯೆ ನೀಡಿತು.
ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಚರಂಡಿ ದುರಸ್ತಿ ಅಲ್ಲಲ್ಲಿ ಅರ್ಧಂಬರ್ಧ ಮಾತ್ರ ಕಳೆದ ಕೆಲವು ದಿನಗಳಿಂದ ಮಾಡಲಾಗುತ್ತಿದೆ.ಆದರೆ ಇದು ಮಳೆ ನೀರು ಸರಾಗವಾಗಿ ಹರಿಯಲು ಸಾಕಾಗುತ್ತಿಲ್ಲ. ಜತೆಗೆ ಹೆಚ್ಚಿನ ಸಮಸ್ಯೆ ಹುಟ್ಟು ಹಾಕುತ್ತಿದೆ.
ಮುಂಡಾಜೆ ಗ್ರಾಮದ ಸೀಟು ಬಳಿ ಮರವೊಂದು ವಿದ್ಯುತ್ ಲೈನ್ ಮೇಲೆ ಉರುಳಿ ಬಿದ್ದು ನೂರಾರು ಗ್ರಾಹಕರಿಗೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಮೃತ್ಯುಂಜಯ, ನೇತ್ರಾವತಿ ಸೇರಿದಂತೆ ತಾಲೂಕಿನ ನದಿಗಳ ನೀರಿನ ಹರಿವು ಹೆಚ್ಚಳ ಗೊಂಡಿದೆ.
ನಿಡಿಗಲ್ ಸೇತುವೆಗೆ ಮತ್ತೆ ತೇಪೆ
ವಿಪರೀತ ಮಳೆ ಕಾರಣ ನಿಡಿಗಳ ನೂತನ ಸೇತುವೆಯ ಮೇಲ್ಪದರದ ಡಾಮರು ಮತ್ತೆ ಎದ್ದು ಹೋಗಿದ್ದು, ಶುಕ್ರವಾರ ರಾತ್ರಿ ತೇಪೆ ಹಾಕಿ ಸೇತುವೆ ನಡುವಿನಲ್ಲಿ ಬ್ಯಾರಿಕೇಡ್ ಗಳನ್ನು ಇರಿಸಲಾಗಿದೆ. ಕಳೆದ ಸೋಮವಾರ ರಾತ್ರಿ ಕೂಡ ಇಲ್ಲಿ ತೇಪೆ ಹಾಕಲಾಗಿತ್ತು.