ಬೆಳ್ತಂಗಡಿ : ‘ ಬೆಳ್ತಂಗಡಿಯಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ಆಗಿಲ್ಲವೋ ಅದನ್ನು ಶಾಸಕ ಹರೀಶ್ ಪೂಂಜಾ ಮಾಡುತ್ತಿದ್ದಾರೆ. ಈಗಾಗಲೇ 2500 ಕೋಟಿಗೂ ಅಧಿಕ ಅನುದಾನವನ್ನು ತಾಲ್ಲೂಕಿಗೆ ತಂದು ಬೆಳ್ತಂಗಡಿಯಲ್ಲಿ ಅಭಿವೃದ್ಧಿಯ ದೀಪಾವಳಿಯ ಸಂಭ್ರಮಾಚರಣೆ ನಡೆಯುತ್ತಿದೆ ‘ ಎಂದು ರಾಜ್ಯ ಇಂಧನ ಮತ್ತು ಕನ್ನಡ – ಸಂಸ್ಕೃತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಅವರು ಸೋಮವಾರ ಬೆಳ್ತಂಗಡಿ ಬಸ್ ಸ್ಟ್ಯಾಂಡ್ ಬಳಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ದೋಸೆ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ದಿ ಜೊತೆಗೆ ಭಾರತೀಯ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿವೆ. ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ದಿ ಜೊತೆಗೆ ಭಾರತದ ಗತ ವೈಭವವನ್ನು ಮತ್ತೆ ಸ್ಥಾಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲೂ ಅಂಜನಾದ್ರಿ ಪರ್ವತಕ್ಕೆ 100 ಕೋಟಿ ನೀಡುವ ಮೂಲಕ ಪರಂಪರೆ ಸಂಸ್ಕೃತಿಯನ್ನು ಬಿಂಬಿಸುವ ಕೆಲಸವಾಗುತ್ತಿದೆ ‘ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ‘ಪ್ರತಿಯೊಬ್ಬರ ಮನಸ್ಸು ನಂದಾದೀಪವಾಗಬೇಕು. ದೇಶಾದ್ಯಂತ ವೈವಿಧ್ಯಮಯ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿಯ ದೀಪದ ಜೊತೆ ನಮ್ಮ ಮನಸ್ಸಿನೊಳಗಿನ ನಿರಾಸೆ, ಅಸೂಯೆ, ಮತ್ಸರದ ಕತ್ತಲೆಯನ್ನು ಹೋಗಲಾಡಿಸುವ ಕೆಲಸವಾಗಬೇಕು’ ಎಂದರು.
ಶಾಸಕ ಹರೀಶ್ ಪೂಂಜಾ ಪ್ರಾಸ್ತಾವಿಕವಾಗಿ ಮಾತನಾಡಿ, ‘ದೇಶದಲ್ಲೇ ದೀಪಾವಳಿ ಸಂದರ್ಭ ದೋಸೆ ಹಬ್ಬ ಆಚರಣೆ ಬೆಳ್ತಂಗಡಿಯಲ್ಲಿ ಮಾತ್ರ. ಕಳೆದ ವರ್ಷ 25 ಸಾವಿರ ಜನ ದೋಸೆಯನ್ನು ಸವಿದಿದ್ದು, ಈ ಭಾರಿ 50 ಸಾವಿರ ಜನ ದೋಸೆ ಸವಿಯವ ನಿರೀಕ್ಷೆಯಿದೆ’ ಎಂದರು.
ಡಾ. ರವೀಶ್ ಪರವನ್ ಪಡುಮಲೆ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಪರವನ್ ಸಂಘದ ವತಿಯಿಂದ ಸಚಿವ ಸುನೀಲ್ ಕುಮಾರ್ ಹಾಗೂ ಶಾಸಕ ಹರೀಶ್ ಪೂಂಜಾರನ್ನು ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಜನಾರ್ಧನ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅಭಿಲಾಶ್, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ,
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ, ಶ್ರೀನಿವಾಸ್ ರಾವ್ ಧರ್ಮಸ್ಥಳ
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಪ್ರಮುಖರಾದ ಸೀತಾರಾಮ ಬೆಳಾಲ್, ವಿನೀತ್ ಕೋಟ್ಯಾನ್, ಉಮೇಶ್ ಕುಲಾಲ್, ಜೋಯೆಲ್ ಮೆಂಡೋನ್ಸಾ, ಜಯಂತ ಗೌಡ, ಪ್ರಭಾಕರ ಸವಣಾಲು ಇದ್ದರು.
ಬಿಜೆಪಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಯಶವಂತ ಗೌಡ ಸ್ವಾಗತಿಸಿದರು. ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.
ಬೆಳ್ತಂಗಡಿಯಲ್ಲಿ ಸುಸಜ್ಜಿತವಾದ ಬಸ್ ಸ್ಟ್ಯಾಂಡ್ ನಿರ್ಮಾಣಕ್ಕೆ ಸುನೀಲ್ ಕುಮಾರ್ ಅವರ ವಿಶೇಷ ಮುತುವರ್ಜಿಯಿಂದ ಈಗಾಗಲೇ ರೂ.12 ಕೋಟಿ ಅನುಮೋದನೆಯಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಈಗಾಗಲೇ 170 ಕೋಟಿ ಅನುದಾನ ನೀಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಪುತ್ತೂರು ಜಗದೀಶ್ ಆಚಾರ್ಯ ಬಳಗದವರಿಂದ ಗಾನವೈಭವ ಕಾರ್ಯಕ್ರಮ, ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ವತಿಯಿಂದ ವಿವಿಧ ನೃತ್ಯ ಕಾರ್ಯಕ್ರಮ, ಸುಡುಮದ್ದು ಪ್ರದರ್ಶನ, ಗೋಪೂಜೆ, ದೇವದಾಸ್ ಕಾಪಿಕಾಡ್ ತಂಡದಿಂದ ನಾಯಿದ ಬೀಲ ಹಾಸ್ಯಮಯ ನಾಟಕ ನಡೆಯಿತು.