ಬೆಳ್ತಂಗಡಿ: ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಕುರೆಲ್ಯ ಮನೆಯ ನಂದೇಶ್ ಶೆಟ್ಟಿಯವರ ಮನೆಯಲ್ಲಿ ಕಳೆದ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು ಅವರು ಸಾಕುತ್ತಿದ್ದ ಆಡನ್ನು ಬಲಿ ಪಡೆದಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ಕೆಲವು ದಿನಗಳ ಹಿಂದೆ ನಾವುರ, ಬಳಂಜ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಊರಿನ ಜನರು ಭಯಬೀತರಾಗಿದ್ದರು. ಈಗಾಗಲೇ ಅರಣ್ಯ ಇಲಾಖೆಯವರು ಅಲ್ಲಲ್ಲಿ ಬೋನ್ ಇಟ್ಟಿದ್ದು ಕಾರ್ಯಚಾರಣೆ ನಡೆಸಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆಯಿಂದ ಯಾರು ಹೊರಗೆ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅದರ ಜೊತೆಗೆ ರಾತ್ರಿಯಂತು ಕರೆಂಟ್ ಕಣ್ಣಮುಚ್ಚಾಲೆಯಿಂದ ಸಾರ್ವಜನಿಕರು ಹೊರಗೆ ಬರಲು ಹಿಂಜರಿಯುತ್ತಾರೆ. ನಿನ್ನೆ ರಾತ್ರಿ ನಂದೇಶ್ ಅವರ ಮನೆಯ ಆಡು ಒಂದನ್ನು ಚಿರತೆ ಹಿಡಿದಿದ್ದು, ಆಡು ಸಾವನ್ಬಪ್ಪಿದೆ.
ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅಳದಂಗಡಿ ವಿಭಾಗದ ಉಪ ಅರಣ್ಯ ಅಧಿಕಾರಿ ಸುರೇಶ್ ಗೌಡ್ರು,ಅರಣ್ಯ ರಕ್ಷಕ ಮಂಜುನಾಥ ಸವಲಿ,ಪೂವಪ್ಪಹಾಗೂ ಇತರರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ