ಬೆಳ್ತಂಗಡಿ: ಭಗವಂತನ ಪೂಜೆ, ಧ್ಯಾನದಿಂದ ಮನಸ್ಸನ್ನು ಏಕಾಗ್ರತೆಗೊಳಿಸಿಕೊಂಡು ದುಶ್ಚಟಗಳಿಂದ ದೂರ ಸರಿಯಲು ಸಾಧ್ಯ ಎಂದು ಶ್ರೀಕ್ಷೇತ್ರ ಧ.ಗ್ರಾ.ಯೋ.ಕಾರ್ಯನಿರ್ವಾಹಕ ನಿರ್ದೇಶಕ ಡಾl ಎಲ್.ಎಚ್.ಮಂಜುನಾಥ್ ಹೇಳಿದರು.
ಸೋಮವಾರ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಗುರುವಾಯನಕೆರೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ತಾಲೂಕು ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಎಸ್.ಡಿ.ಎಂ. ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ನಾರಾವಿಯ ಧರ್ಮಶ್ರೀ ಸಭಾಭವನದಲ್ಲಿ ಕಳೆದ 8 ದಿನಗಳಿಂದ ನಡೆಯುತ್ತಿದ್ದ 1550ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದುಶ್ಚಟಗಳು ಮನಸ್ಸಿನ ಮೇಲೆ ಹತೋಟಿ ಸಾಧಿಸಿ ಆರೋಗ್ಯವನ್ನು ಹಾಳು ಮಾಡುತ್ತದೆ. ಇದರಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯಬೇಕಾಗುತ್ತದೆ. ಶಿಬಿರದಲ್ಲಿ ಭಾಗವಹಿಸಿದವರೆಲ್ಲರೂ ಬದಲಾವಣೆಯ ಘಟ್ಟದಲ್ಲಿದ್ದು ಇದಕ್ಕೆ ಪೂರಕವಾಗಿ ನೀವೆಲ್ಲರೂ ದೇವರ ಧ್ಯಾನ ಪ್ರಾರ್ಥನೆಯತ್ತ ಮನಸ್ಸನ್ನು ಕೇಂದ್ರೀಕರಿಸಬೇಕು. ನಾಳೆಯಿಂದ ಪ್ರತಿದಿನದ ಬೆಳಗು ದೇವರ ಪೂಜೆಯಿಂದ ಆರಂಭವಾಗಬೇಕು ಕೈ ಹಿಡಿದವಳ ಮೇಲೆ ಪ್ರೀತಿ, ಮಕ್ಕಳ ಸಾನಿಧ್ಯ ಇವು ಮದ್ಯಪಾನ ವಿರುದ್ಧದ ಹೋರಾಟಕ್ಕೆ ಶಕ್ತಿ ನೀಡಬಲ್ಲುದು ಎಂದರು.
ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷೆ ಶಾರದಾ ಆರ್. ರೈ ಅಧ್ಯಕ್ಷತೆ ವಹಿಸಿದ್ದರು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಭಟ್, ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಆಡಳಿತೆ ಮೊಕ್ತೇಸರ ನಿರಂಜನ ಅಜ್ರಿ, ನಾರಾವಿ,ಅಂಡಿಂಜೆ, ಮರೋಡಿ ಗ್ರಾ.ಪಂ. ಅಧ್ಯಕ್ಷರುಗಳಾದ ಆಶಾಲತಾ, ಜಯಂತಿ, ಪದ್ಮಶ್ರೀ ಜೈನ್, ಉದ್ಯಮಿ ವಸಂತ ಗುಣನೀಲ, ಪ್ರಗತಿಪರ ಕೃಷಿಕ ರತ್ನಾಕರ ಭಟ್ ಹೊಳೆಹೊದ್ದು, ನಾರಾವಿ ಹಾ.ಉ.ಸ.ಸಂ.ದ ಅಧ್ಯಕ್ಷ ಶೇಖರ ಹೆಗ್ಡೆ, ನಾರಾವಿ ಗ್ರಾ.ಪಂ.ಉಪಾಧ್ಯಕ್ಷ ಉದಯ ಹೆಗ್ಡೆ, ತಾ.ಜ.ಜಾ.ವೇ.ಸದಸ್ಯ ಮೋಹನ ಅಂಡಿಂಜೆ, ಯೋಜನೆಯ ಕೇಂದ್ರ ಒಕ್ಕೂಟ ಅಧ್ಯಕ್ಷ ಪ್ರಭಾಕರ ಪೊಸಂದೋಡಿ, ನಿಯೋಜಿತ ಅಧ್ಯಕ್ಷ ಸದಾನಂದ ಬಂಗೇರ, ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಜ.ಜಾ.ವೇ.ಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ನಾರಾವಿ ವಲಯ ಮೇಲ್ವಿಚಾರಕಿ ದಮಯಂತಿ, ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ, ಆರೋಗ್ಯ ಸಹಾಯಕಿ ನೇತ್ರಾವತಿ, ಯೋಗ ಶಿಕ್ಷಕಿ ವಂದನಾ, ರಾಜೇಶ್ ಭಂಡಾರಿ, ಜ.ಜಾ.ವೇ. ಕಾರ್ಕಳ ತಾಲೂಕು ಮಾಜಿ ಅಧ್ಯಕ್ಷ ಹರಿಶ್ಚಂದ್ರ ತೆಂಡೂಲ್ಕರ್ ಉಪಸ್ಥಿತರಿದ್ದರು.
ಶಿಬಿರದಲ್ಲಿ 58 ಮಂದಿ ನವಜೀವನಕ್ಕೆ ಪ್ರವೇಶಿಸಿದರು. ಯೋಜನೆಯ ಯೋಜನಾಧಿಕಾರಿ ಯಶವಂತ ಎಸ್. ಸ್ವಾಗತಿಸಿದರು. ಶಿಬಿರಾರ್ಥಿ ರಮೇಶ್ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆ ವಲಯಾಧ್ಯಕ್ಷ ನಿತ್ಯಾನಂದ ನಾವರ ವಂದಿಸಿದರು. ಮಾಜಿ ವಲಯಾಧ್ಯಕ್ಷ ಯಶೋಧರ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.