ಬೆಳ್ತಂಗಡಿ:ಶ್ರೀ ಧರ್ಮಸ್ಥಳ ಕ್ಷೇತ್ರವು ದಾನ, ಧರ್ಮಗಳಿಗೆ ಹೆಸರಾಗಿದ್ದು, ಜನಕಲ್ಯಾಣಕ್ಕಾಗಿ ನಾನಾ ಯೋಜನೆಗಳನ್ನು ರೂಪಿಸಿದೆ.ಉಜಿರೆಯ ಆಸ್ಪತ್ರೆಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು,ಲಾಭದ ಯಾವುದೇ ಅಪೇಕ್ಷೆ ಇಲ್ಲದೆ ಚಿಕಿತ್ಸೆ, ಸೇವೆಯನ್ನು ನೀಡಲಾಗುತ್ತಿದೆ ಎಂದು ಎಸ್.ಡಿ.ಎಂ. ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.
ಅವರು ಸೋಮವಾರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ದಂತ ಚಿಕಿತ್ಸಾಲಯ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.
ಸಿಬ್ಬಂದಿಗಳ ಶ್ರಮ, ನಗುಮೊಗದ ಸೇವೆ ಸಂಸ್ಥೆಯ ಬೆಳವಣಿಗೆಗೆ ತಳಹದಿಯಾಗುತ್ತದೆ. ಉತ್ತಮ ಸೇವೆಯನ್ನು ನೀಡುವ ಸಿಬ್ಬಂದಿಗಳು ಶ್ಲಾಘನೆಗೆ ಅರ್ಹರು ಎಂದರು. ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಸ್ಥಾಪಿಸಿರುವ ಆಸ್ಪತ್ರೆಯು ಚಿಕಿತ್ಸೆ ಹಾಗೂ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ತುರ್ತು ವೈದ್ಯಕೀಯ ಸೇವೆ,ರೋಗಿಗಳ ಆರೈಕೆಯ ಬಗ್ಗೆ ವಿಶೇಷ ಮುತುವರ್ಜಿಯಿಂದ ಸೇವೆ ನೀಡುತ್ತದೆ ಎಂದು ಹೇಳಿದರು.
ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್, ಸಿ ಇ ಒ ಹರೀಶ್ ವೈ, ಎಸ್ ಡಿ ಎಂ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಉದಯ ಚಂದ್ರ, ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಗಿರಿಧರ ಕಲ್ಲಾಪುರೆ, ಹಿರಿಯ ಉಪನ್ಯಾಸಕ ಜೇಮ್ಸ್ ಅಬ್ರಹಾಂ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಬಿ. ಸೋಮಶೇಖರ ಶೆಟ್ಟಿ, ಡಾ.ರವಿ ಗುಪ್ತ, ಎಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ಅಶೋಕ್, ರಾಜವರ್ಮ ಜೈನ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದೇವೇಂದ್ರ ಕುಮಾರ್,ಫಿಸಿಶಿಯನ್ ಡಾ.ಸಾತ್ವಿಕ್ ಜೈನ್, ದಂತ ವೈದ್ಯೆ ಮೀರಾ ಅನುಪಮ್,ಆಸ್ಪತ್ರೆಯ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.
ಸೋಮವಾರದಿಂದ ಶನಿವಾರದ ತನಕ ಬೆಳಿಗ್ಗೆ 9ರಿಂದ ಸಂಜೆ 4ಗಂಟೆ ತನಕ ಕಾರ್ಯನಿರ್ವಹಿಸಲಿರುವ ದಂತ ಚಿಕಿತ್ಸಾಲಯ ವಿಭಾಗದಲ್ಲಿ ಶನಿವಾರ ಹಾಗೂ ಭಾನುವಾರಗಳಂದು ವಿಶೇಷ ಚಿಕಿತ್ಸೆ ನೀಡುವ ತಜ್ಞ ವೈದ್ಯರ ಸೇವೆ ಲಭ್ಯವಿದೆ.