ಕಾಸರಗೋಡು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ದಿನಾಂಕ 22 ರಿಂದ ೨೪ ರ ತನಕ ಮೂರು ದಿನಗಳ ಕಾಲ ರಾಷ್ಟ್ರಮಟ್ಟದ ಕಾವ್ಯಕಮ್ಮಟವನ್ನು ಎಡನೀರು ಮಠದಲ್ಲಿ ಹಮ್ಮಿ ಕೊಂಡಿ ದೆ. ರಾಷ್ಟ್ರ ಮಟ್ಟದಿಂದ ಸುಮಾರು ೬೦ ಮಂದಿ ಶಿಬಿರಾರ್ಥಿಗಳು ಈ ಕಮ್ಮಟದಲ್ಲಿ ಪಾಲ್ಗೊಳ್ಳುವರು
ಸೆ. ೨೨ ರಂದು ಬೆಳಿಗ್ಗೆ ೯ . ೩೦ ಕ್ಕೆ ಗೆ ಎಡನೀರು ಮಠದ ಸ್ವಾಮೀಜಿ ಶ್ರೀ ಸಚ್ಚಿದಾನಂದ ಭಾರತಿ ಅವರ ಸಾನ್ನಿಧ್ಯದಲ್ಲಿ ಹಿರಿಯ ಕವಯಿತ್ರಿ ವಿಜಯಪುರದ ಸರಸ್ವತಿ ಚಿಮ್ಮಲಗಿ ಅವರು ಕಮ್ಮಟವನ್ನು ಉದ್ಘಾಟಿಸಲಿದ್ದು ಹಿರಿಯ ಕವಿ ಡಾ. ರಮಾನಂದ ಬನಾರಿ, ವಿದ್ವಾಂಸ ಲಕ್ಷ್ಮೀಶ ತೋಳ್ಳಾಡಿ ಮುಖ್ಯ ಅತಿಥಿಗಳಾಗಿರುವರು ಲೇಖಕ – ಅನುವಾದಕ ಪ್ರೊ. ಪಿ. ಎನ್. ಮೂಡಿತ್ತಾಯ, ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್., ಅಕಾಡೆಮಿಯ ಸದಸ್ಯ ಸಂಚಾಲಕರಾದ ದೀಪ್ತಿ ಭದ್ರಾವತಿ ಮತ್ತು ಕೇಶವ ಬಂಗೇರರು ಭಾಗವಹಿಸುವರು.
ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ಅಧ್ಯಕ್ಷತೆ ವಹಿಸುವರು. ಮೂರು ದಿನಗಳ ಕಾಲ ನಡೆಯುವ ಕಮ್ಮಟದಲ್ಲಿ ಡಾ. ಯು. ಮಹೇಶ್ವರಿ, ಡಾ. ವಸಂತಕುಮಾರ ಪೆರ್ಲ, ಬಿ. ಆರ್ ಸೂರಜ್, ಸರಸ್ವತಿ ಚಿಮ್ಮಲಗಿ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಡಾ. ಧನಂಜಯ ಕುಂಬಳ, ನಾಗರಾಜ ತಲಕಾಡು, ಸುಬ್ಬು ಹೊಲೆಯಾರ್, ಡಾ. ಎಚ್. ಎಂ.ಚನ್ನಪ್ಪಗೋಳ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
ಮೂರು ದಿನಗಳ ಕಾಲವೂ ಗಂಪು ಚರ್ಚೆ, ಕಾವ್ಯರಚನೆ, ಕವಿಗೋಷ್ಠಿ ಮೊದಲಾದ ಕಾರ್ಯಕ್ರಮ ನಡೆಯಲಿದೆ. ಶನಿವಾರ ಅಪರಾಹ್ನ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಸಾನ್ನಿಧ್ಯ ದಲ್ಲಿ , ಕವಿ ಬಿ. ಆರ್. ಲಕ್ಷ್ಮಣರಾವ್ ಸಮಾರೋಪ ಭಾಷಣ ಮಾಡುವರು.
ಸುಬ್ಬು ಹೊಲೆಯಾರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು , ಡಾ. ವಸಂತಕುಮಾರ ಪೆರ್ಲ ಕಮ್ಮಟದ ಫಲಶೃತಿ ಬಗ್ಗೆ ಮಾತಾಡುವರು, ಜಿಲ್ಲಾ ಲೇಖಕರ ಸಂಘದ ಕಾರ್ಯದರ್ಶಿ ಪ್ರೊ. ಪಿ.ಎಸ್. ಮೂಡಿತ್ತಾಯ, ಅಕಾಡೆಮಿಯ ಸದಸ್ಯ ಸಂಚಾಲಕರಾದ ದೀಪ್ತಿ ಭದ್ರಾವತಿ ಮತ್ತು ಕೇಶವ ಬಂಗೇರ ಉಪಸ್ಥಿತರಿರುವರು ಅಕಾಡೆಮಿಯ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ್ ಅಧ್ಯಕ್ಷತೆ ವಹಿಸುವರು.