ಬೆಳ್ತಂಗಡಿ: ಅತ ಕಿರಿಯ ವಯಸ್ಸಿನಲ್ಲಿ ಅಸಾಧಾರಣ ಸಾಧನೆ ತೋರಿದ ಬಾಲ ಪ್ರತಿಭೆ ಧರ್ಮಸ್ಥಳದ ಸನಿಹದ ಕನ್ಯಾಡಿ 2 ಗ್ರಾಮದ ಸರಕಾರಿ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಡಾ.ಶೌರ್ಯ.ಎಸ್.ವಿ. ಅವರ ಸಾಧನೆಯನ್ನು ಪರಿಗಣಿಸಿ ತಮಿಳುನಾಡಿನ ಏಷ್ಯಾ ವೇದಿಕ್ ಕಲ್ಚರ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
12 ವರ್ಷದ ಬಾಲಕಿ ಈ ವಯಸ್ಸಿನಲ್ಲೆ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಊರಿನ, ಸರಕಾರಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾಳೆ. ಎಲ್ಲ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ 42 ಕ್ಕಿಂತಲೂ ಹೆಚ್ಚು ಪ್ರಮಾಣ ಪತ್ರ ತನ್ನದಾಗಿಸಿಕೊಂಡಿರುವ ಶೌರ್ಯ.ಎಸ್.ವಿ. ಜು.30 ರಂದು ತಮಿಳುನಾಡಿನಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದರು.
ಮೂಲತಃ ಚಿಕಮಗಳೂರಿನ ವಲೇಕರೇಟಿಯಲ್ಲಿ ಜನಿಸಿದ ಡಾ.ಶೌರ್ಯ.ಎಸ್.ವಿ ಸದ್ಯ ಧರ್ಮಸ್ಥಳ ಗ್ರಾಮದ ಕನ್ಯಾಡಿ 2 ಸರಕಾರಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸುರೇಶ್ ಗೌಡ, ಕುಸುಮ ಗೌಡ ದಂಪತಿ ಪುತ್ರಿ.
ಯಾವುದೇ ಗುರುಗಳ ಮಾರ್ಗದರ್ಶನ ಇಲ್ಲದೇ ಮನೆಯಲ್ಲಿಯೇ ಮೊಬೈಲ್ ಟಿವಿಗಳಲ್ಲಿ ಕಲಿತ ದೊಡ್ಡ ಪ್ರತಿಭೆ. ಶೌರ್ಯ 1 ನೇ ತರಗತಿಯಲ್ಲಿರುವಾಗ ಭಗವದ್ಗೀತೆ ಅಭ್ಯಾಸ ಮಾಡಿ ತಾಲೂಕು ಮಟ್ಟದ ಭಗವದ್ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ 3ನೇ ಸ್ಥಾನ ಪಡೆದ ಕೀರ್ತಿ ಇವಳದ್ದು. ನಂತರ 7 ನೇ ತರಗತಿ ಯಲ್ಲಿ ಇರುವಾಗ ಲಾಕ್ಡೌನ್ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಗಾಂಧೀಜಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ಕಲಾಮ್ ವರ್ಲ್ಡ್ ರೆಕಾರ್ಡ್ ಈ ದೊಡ್ಡ ರಂಗದಲ್ಲಿ ಹೆಸರು ದಾಖಲಿಸಿದ್ದಾಳೆ.
ಇದುವರೆಗೂ 30 ವರ್ಷದ ಒಳಗಿನವರಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ 12 ವರ್ಷದ ಬಾಲಕಿಯಾಗಿ ಶೌರ್ಯ.ಎಸ್.ವಿ. ಗುರುತಿಸಿಕೊಂಡಿದ್ದಾರೆ.