ಉಳ್ಳಾಲ: ಉಳ್ಳಾಲದಿಂದ 5.2 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ್ದ ಹಡಗಿನಲ್ಲಿದ್ದ 15 ಮಂದಿ ಸಿರಿಯಾ ದೇಶದವರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.
ಪ್ರಿನ್ಸಸ್ ಮಿರಲ್ ಹೆಸರಿನ ಹಡಗು ಮಲೇಷ್ಯಾದಿಂದ ಲೆಬನಾನ್ ದೇಶಕ್ಕೆ ತೆರಳುತ್ತಿತ್ತು. ಈ ಹಡಗಿನಲ್ಲಿ ಎಂಟು ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸಲಾಗುತ್ತಿತ್ತು. ಎಂಜಿನ್ನ ಒಳಭಾಗದಲ್ಲಿ ಸಣ್ಣ ರಂಧ್ರ ಮೂಲಕ ನೀರು ಬರಲು ಪ್ರಾರಂಭಿಸಿದ್ದು, ಇದನ್ನು ತುರ್ತು ದುರಸ್ತಿ ಪಡಿಸುವ ಸಲುವಾಗಿ ಲಂಗರಿಗೆ ಅವಕಾಶ ಕಲ್ಪಿಸುವಂತೆ ನೌಕೆಯ ಕ್ಯಾಪ್ಟನ್ ಬಂದರು ಅಧಿಕಾರಿಗಳನ್ನು ಮಂಗಳವಾರ ಸಂಪರ್ಕಿಸಿದ್ದರು.
ಮಂಗಳೂರು ಹಳೆ ಬಂದರಿನಿಂದ ಉಳ್ಳಾಲ ಕಡೆಗೆ 5.2 ಮೈಲಿ ದೂರದಲ್ಲಿ ಅಪಾಯಕ್ಕೆ ಸಿಲುಕಿ ಲಂಗರು ಹಾಕಲಾಗಿತ್ತು. ಕೋಸ್ಟ್ ಗಾರ್ಡ್ನ ವಿಕ್ರಮ್ ಮತ್ತು ಮತ್ತೊಂದು ಹಡಗುಗಳ ಮೂಲಕ ಸಮುದ್ರ ರಭಸದ ಮಧ್ಯೆ ಕಾರ್ಯಾಚರಣೆ ನಡೆಸಿ, ಅಪಾಯದಲ್ಲಿದ್ದ ನೌಕೆಯಿಂದ ಕ್ಯಾಪ್ಟನ್ ಹಾಗೂ ಸಿಬ್ಬಂದಿ ಸೇರಿ 15 ಮಂದಿಯನ್ನು ರಕ್ಷಿಸಲಾಗಿದೆ.
ದಕ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಜೂ.22ರಂದು ರೆಡ್ ಅಲರ್ಟ್ ಘೋಷಣೆ ಮಾಡುವ ಮೂಲಕ ಹವಾಮಾನ ಇಲಾಖೆ ಭರ್ಜರಿ ಮಳೆಯಾಗುವ ಸೂಚನೆ ನೀಡಿದೆ.