ಮಡಿಕೇರಿ : ಗ್ರೀನ್ ಸಿಟಿ ಫೋರಂ ವತಿಯಿಂದ ಹೋಟೆಲ್ ನೀಲ್ ಕಿಚನ್ ಸಹಕಾರದಲ್ಲಿ ಮಡಿಕೇರಿ ನಗರಸಭೆಯ ಪೌರ ಕಾರ್ಮಿಕರಿಗೆ ಸ್ವೆಟರ್ ವಿತರಿಸಲಾಯಿತು.
ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಆಯುಕ್ತ ರಾಮದಾಸ್, ನೀಲ್ ಕಿಚನ್ ಮಾಲೀಕ ಒಡಿಯಂಡ ದಿನೇಶ್, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಹಾಗೂ ಇತರರು 54 ಮಂದಿ ಪೌರ ಕಾರ್ಮಿಕರಿಗೆ ಸ್ವೆಟರ್ ವಿತರಿಸಿದರು.
ಬಳಿಕ ಮಾತನಾಡಿದ ಅನಿತಾ ಪೂವಯ್ಯ, ಪೌರ ಕಾರ್ಮಿರಿಗಾಗಿ ಸರ್ಕಾರದ ವತಿಯಿಂದ ಹಲವು ಸವಲತ್ತುಗಳನ್ನು ನೀಡಲಾಗುತ್ತಿದೆ. ಇದರ ಜತೆಗೆ ಸಾರ್ವಜನಿಕರ ಸಹಕಾರ ಇದ್ರೆ ಮಾತ್ರ ಅವರ ಬದುಕು ಹಸನಾಗಲು ಸಾಧ್ಯ. ಪೌರ ಕಾರ್ಮಿಕರ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ನಗರ ಸ್ವಚ್ಛವಾಗಿರಲು ಸಾಧ್ಯ ಎಂದರು. ಗ್ರೀನ್ ಸಿಟಿ ಫೋರಂ ಹಾಗೂ ನೀಲ್ ಕಿಚನ್ ಅತ್ಯುತ್ತಮ ಗುಣಮಟ್ಟದ ಸ್ವೆಟರ್ ಅನ್ನು ಪೌರ ಕಾರ್ಮಿಕರಿಗೆ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಚೈಯ್ಯಂಡ ಸತ್ಯ ಗಣಪತಿ ಮಾತನಾಡಿ, ಮಡಿಕೇರಿ ನಗರ ಸ್ವಚ್ಛವಾಗಿರುವುದಕ್ಕೆ ಪೌರ ಕಾರ್ಮಿಕರೇ ಮುಖ್ಯ ಕಾರಣ. ನಗರ, ಪಟ್ಟಣ ಪ್ರದೇಶಗಳ ಶುಚಿತ್ವಕ್ಕಾಗಿ ಪೌರ ಕಾರ್ಮಿಕರು ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಶ್ರಮಿಸುತ್ತಿದ್ದಾರೆ. ಗ್ರೀನ್ ಸಿಟಿ ಫೋರಂ ವತಿಯಿಂದ ಮುಂದಿನ ದಿನದಲ್ಲಿ ಪೌರ ಕಾರ್ಮಿಕರು ಮತ್ತು ಕುಟುಂಬಕ್ಕೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರಾದ ಕವನ್ ಕಾವೇರಪ್ಪ, ಚಂದ್ರ, ಗ್ರೀನ್ ಸಿಟಿ ಫೋರಂನ ದಾಮೋದರ್ ವ್ಯಾಂಡಮ್ ಹಾಗೂ ಇತರರು ಉಪಸ್ಥಿತರಿದ್ದರು.