ಬೆಳ್ತಂಗಡಿ: ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಕನ್ಯಾಡಿ 1 ಗ್ರಾಮದ ಪ್ರಭಾಕರ ನಾಯ್ಕ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದಾರೆ. ಕನ್ಯಾಡಿ 1 ಗ್ರಾಮದ ಹರಿಶ್ಚಂದ್ರ ಗುಡಿಗಾರ ಎಂಬವರ ಮೇಲೆ ಅಕ್ರಮದ ಆಪಾದನೆ ಮಾಡಿದ್ದಾರೆ.
ಆರೋಪಿಯು ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಪ್ರಮೋದ್ ದಿಡುವರವರ ಮುಖಾಂತರ ಕನ್ಯಾಡಿ ಗ್ರಾಮದ ಸರ್ವೆ ನಂಬ್ರ 18 ಮತ್ತು ಸರಕಾರಿ ಕುಮ್ಮಿ ಸರ್ವೆ ನಂಬ್ರ 48 ರಲ್ಲಿರುವ ಜಮೀನಿನಿಂದ ಸಂಬಂಧಿಸಿದ ಇಲಾಖೆಯ ಯಾವುದೇ ಅನುಮತಿ ಪಡೆದುಕೊಳ್ಳದೆ ರಾಜರೋಷವಾಗಿ ಕಪ್ಪು ಕಲ್ಲನ್ನು ಸ್ಫೋಟಕ ಸಾಮಾಗ್ರಿ ಬಳಸಿಕೊಂಡು 1 ವರ್ಷದಿಂದ ಲೋಡುಗಟ್ಟಲೆ ಕಲ್ಲುಗಳನ್ನು ಲಾರಿಯಲ್ಲಿ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ.
ಸ್ಫೋಟಕ ಬಳಕೆಯಿಂದ ಆಸುಪಾಸಿನ ಮನೆ, ಕೃಷಿ ಹೊಂದಿರುವ ಜಮೀನುಗಳಿಗೆ, ದನ ಕರುಗಳಿಗೆ ಹಾಗೂ ಹತ್ತಿರದಲ್ಲಿರುವ ಶಾಲೆಗೆ ಭಾರೀ ತೊಂದರೆಯಾಗುತ್ತಿದ್ದು, ಜೀವಹಾನಿ ಸಂಭವಿಸುವ ಸಾಧ್ಯತೆ ಇರುತ್ತದೆ. ಸದ್ರಿ ಸ್ಥಳವು ಮೀಸಲು ಅರಣ್ಯ ಕೂಡ ಆಗಿರುವುದರಿಂದ ಪ್ರಕೃತಿಗೂ, ಕಾಡುಪ್ರಾಣಿಗಳಗೂ ತೊಂದರೆಯಾಗುತ್ತಿದೆ. ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗುತ್ತಿದ್ದು, ಪ್ರಕೃತಿ ಸಂಪತ್ತನ್ನು ರಾಜಾರೋಷವಾಗಿ ದೋಚುತ್ತಿದ್ದಾರೆ. ಬಾವಿಗಳು ಅಪಾಯದಲ್ಲಿರುತ್ತದೆ. ಪ್ರಕೃತಿ ಸಂಪತ್ತನ್ನು ದೋಚುತ್ತಿರುವುದರಿಂದ ಸರಕಾರಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿರುತ್ತದೆ.
ಪ್ರಕೃತಿ ಸಂಪತ್ತನ್ನು ರಾಜರೋಷವಾಗಿ ಬಳಕೆ ಮಾಡುವುದನ್ನು ತಕ್ಷಣ ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಹಾಗೂ ಎಷ್ಟು ಘನ ಮೀಟರ್ ಹೋಗಿದೆ ಅಷ್ಟು ಪ್ರಮಾಣದಲ್ಲಿ ದಂಡವನ್ನು ವಸೂಲು ಮಾಡಿ ಸರಕಾರಕ್ಕೆ ಸಂದಾಯ ಮಾಡಿಕೊಳ್ಳಬೇಕು ಎಂದು ದೂರಿನಲ್ಲಿ ವಿನಂತಿಸಲಾಗಿದೆ. ಸದ್ರಿ ದೂರಿನ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.