ಬೆಳ್ತಂಗಡಿ: ದೇಶದ ರಕ್ಷಣೆ, ಸಂಸ್ಕೃತಿಯ ಪಾಲನೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದನ್ನು ಜನತೆ ಅರಿತುಕೊಂಡಿದ್ದಾರೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಪಕ್ಷವು ಪೂರ್ಣ ಬಹುಮತ ಪಡೆಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಆದಿತ್ಯವಾರ ಅವರು ಬೆಳ್ತಂಗಡಿಯಲ್ಲಿ ನಡೆಯುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಬಂದ ಸಂದರ್ಭ ಧರ್ಮಸ್ಥಳ ಸನ್ನಿಧಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಈಗಾಗಲೇ ಯಾತ್ರೆಯು ಮಲೆಮಹಾದೇಶ್ವರ ಬೆಟ್ಟ, ಚಾಮರಾಜನಗರ, ಹಾಸನ, ಕೊಡಗು, ಸುಳ್ಯ, ಪುತ್ತೂರಿನಲ್ಲಿ ನಡೆದು ಬೆಳ್ತಂಗಡಿಯನ್ನು ಪ್ರವೇಶಿಸಿದೆ. ಎಲ್ಲಾ ಕಡೆ ನಮ್ಮ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರಕಿದೆ. ಸಂಘಟನೆಯ ಶಕ್ತಿಯಿಂದಾಗಿ ಜನರ ಸ್ಪಂದನೆ ಪಕ್ಷದ ಪರವಾಗಿದೆ. ದೇಶದ ರಕ್ಷಣೆ ಬಿಜೆಪಿಯಿಂದ ಸಾಧ್ಯ ಎಂಬುದು ಜನರಿಗೆ ಅರಿವಾಗಿರುವುದು ಯಾತ್ರೆಯಿಂದ ಸಾಬೀತಾಗಿದೆ ಎಂದರು.
ಸತ್ತು ಹೋಗಿರುವ ಕಾಂಗ್ರೇಸ್ ಪಕ್ಷಕ್ಕೆ ಯಾರೂ ಸೇರುವ ಮನಸ್ಸು ಮಾಡುವುದಿಲ್ಲ. ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಪ್ರಧಾನಿ ಮೋದಿಯ ಆಡಳಿತ ಎಲ್ಲರಿಗೂ ಮೆಚ್ಚುಗೆಯಾಗಿದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಮುಂದುವರಿಯಲಿದೆ ಎಂದರು.
ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಡಿ.ಕೆ.ಶಿವಕುಮಾರ್ ಅವರು ಬೈಲ್ಲ್ಲಿ ಹೊರಗಿದ್ದಾರೆ. ಭ್ರಷ್ಟಾಚಾರ ಯಾರೂ ಮಾಡಿದರೂ ಪಕ್ಷ ಸಮರ್ಥಿಸುವುದಿಲ್ಲ. ಕಾನೂನು ತನ್ನ ಕೆಲಸ ಮಾಡುತ್ತದೆ. ರಾಜಕಾರಣ ಗಂಗೆಯಂತೆ ಪವಿತ್ರವಾದದ್ದು. ಅದು ಶುದ್ಧವಾಗಿರಬೇಕು ಎಂಬುದು ಬಿಜೆಪಿಯ ನಿಲುವು ಎಂದು ಅವರು ಸ್ಪಷ್ಟಪಡಿಸಿದರು.
ವಿಧಾನ ಸಭಾ ಚುನಾವಣೆ ಸ್ಪರ್ಧೆಯ ಬಗ್ಗೆ ಕೇಳಿದಾಗ ಪಕ್ಷದ ತೀರ್ಮಾನಕ್ಕೆ ತಾನು ಬದ್ಧ ಎಂದರು. ಕಾಂಗ್ರೇಸ್ ಈಗ ಖಾಲಿ ಡಬ್ಬಿಯಂತಿದೆ. ರಾಜ್ಯದ ಜನತೆ ಇದುವರೆಗೆ ಬಿಜೆಪಿಗೆ ಬಹುಮತ ಕೊಟ್ಟಿಲ್ಲ ಎಂಬುದು ನಿಜ. ಆದರೆ ದೇಶದ, ರಾಜ್ಯದ ಹಿತದ ದೃಷ್ಟಿಯಿಂದ ಈ ಬಾರಿ ಜನತೆ ಪಕ್ಷಕ್ಕೆ ಪೂರ್ಣ ಬಹುಮತ ನೀಡಬೇಕು ಎಂದರು.
ಬೆಳ್ತಂಗಡಿ ಶಾಸಕ ಹರೀಶ ಪೂಂಜ ಅವರ ನಡವಳಿಕೆ, ಅವರ ವಿನಯತೆಗೆ ತಾನು ಮಾರು ಹೋಗಿದ್ದೇನೆ. ರಾಜ್ಯದಲ್ಲಿ ಅತಿ ಹೆಚ್ಚು ಅನುದಾನ ಬೆಳ್ತಂಗಡಿಗೇ ದೊರಕಿದೆ. ತಾನು ಗ್ರಾಮೀಣಾಭಿವೃದ್ಧಿ ಸಚಿವನಿದ್ದಾಗ ಕೇಳಿದಷ್ಟು ಅನುದಾನ ನೀಡಿದ್ದೇನೆ ಎಂದು ಶಾಸಕರನ್ನು ಶ್ಲಾಘಿಸಿದರು.
ಸಂಕಲ್ಪ ಯಾತ್ರೆಯ ರಾಜ್ಯ ಸಹ ಸಂಚಾಲಕ ದತ್ತಾತ್ರೇಯ, ಶಾಸಕ ಹರೀಶ ಪೂಂಜ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್, ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ, ಬಿಜೆಪಿ ಮಂಡಲಾಧ್ಯಕ್ಷ ಜಯಂತ ಕೋಟ್ಯಾನ್, ಶ್ರೀನಿವಾಸ ರಾವ್, ನಂದಕುಮಾರ್ ಇದ್ದರು.