ಬೆಳ್ತಂಗಡಿ: ಆಯುರ್ವೇದ ಅತ್ಯಂತ ಮಹತ್ವದ ಪದ್ಧತಿಯಾಗಿದೆ. ನಮ್ಮ ಪ್ರಧಾನಿ ಇದರ ಹಾಗೂ ಯೋಗದ ಕುರಿತು ನೀಡುತ್ತಿರುವ ಸಂದೇಶವನ್ನು ಇಂದು ಜಗತ್ತು ಪಾಲಿಸುತ್ತಿದೆ. ಜನ್ಮಭೂಮಿ,ಕರ್ಮ ಭೂಮಿ,ಪುಣ್ಯ ಭೂಮಿ,ತ್ಯಾಗ ಭೂಮಿ ಯಾಗಿರುವ ನಮ್ಮ ದೇಶ ವಿಶೇಷ ಸ್ಥಾನವನ್ನು ಹೊಂದಿದೆ.
ಆತುರ ಪಡುವ ಇಂದಿನ ಕಾಲದಲ್ಲಿ ವಿಶ್ವಾಸದಿಂದ ಆಯುರ್ವೇದ ಚಿಕಿತ್ಸಾ ಪದ್ಧತಿ ಮುಂದುವರಿಸಿದರೆ ರೋಗ ಶಮನ ಸಾಧ್ಯ
ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಹೇಳಿದರು.
ಅವರು ಧರ್ಮಸ್ಥಳದ ವಸಂತ ಮಹಲ್ ನಲ್ಲಿ ಭಾನುವಾರ ಆಯುರ್ವೇದ ಜ್ಞಾನಯಾನ ಅಭಿಯಾನದಡಿ ಡಾ.ಗಿರಿಧರ ಕಜೆ ಅವರ 6ನೇ ಕೃತಿ ಪ್ರಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಪೌಷ್ಟಿಕ ಆಹಾರ ಬೆಳೆಗಳನ್ನು ಬೆಳೆಯುವವರು ಸಂಖ್ಯೆ ಕಡಿಮೆಯಾಗಿದೆ .ಆದರೆ ಇದನ್ನು ಉಪಯೋಗಿಸುವವರು ಸಂಖ್ಯೆ ಅಧಿಕ ವಾಗಿದೆ.ನಿಯವಿಲ್ಲದ ಆಹಾರ ಪದ್ಧತಿ ಯಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ.ಇದರಿಂದ ಹಳೆಯ ಬೆಳೆಗಳ ಪದ್ಧತಿ ಮುಂದುವರಿಸಿ ಪೂರ್ವಜರು ಅನುಸರಿಸಿದ ಆರೋಗ್ಯ ವ್ಯವಸ್ಥೆ ಮುಂದುವರಿಯಬೇಕು ಎಂದರು.
ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿ, ಆಶೀರ್ವದಿಸಿ,ಪಂಚೇಂದ್ರಿಯಗಳ ಹತೋಟಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಉತ್ತಮ. ಆಯುರ್ವೇದದ ಸಂಶೋಧನೆ ಮೂಲಕ ಪುರಾವೆಗಳನ್ನು ಸಿದ್ಧಪಡಿಸಿದರೆ ಹೆಚ್ಚಿನ ವಿಶ್ವಾಸವಿರುತ್ತದೆ. ಹಿತ ಮಿತವಾದ ಆಹಾರ ಬಳಸುವುದರಿಂದ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಲು ಸಾಧ್ಯವಿದೆ.
ಇತರರ ಬಗ್ಗೆ ಯೋಚಿಸದೆ ನಾವೇನು ಎಂದು ಅರಿತುಕೊಳ್ಳುವ ಜೀವನ ಸೂತ್ರವನ್ನು ಅಳವಡಿಸಿಕೊಂಡು ಪ್ರಕೃತಿಯನ್ನು ರಕ್ಷಿಸಿ ಅದರ ಸದುಪಯೋಗ ಪಡೆದುಕೊಂಡು ಜೀವಿಸಬೇಕು.
ಗಿರಿಧರ ಕಜೆ ಅವರ ಪುಸ್ತಕಗಳಲ್ಲಿ ಜೀವನ ಹಾಗೂ ಆರೋಗ್ಯ ಪದ್ಧತಿಯ ಕುರಿತು ಉತ್ತಮ ಸಲಹೆಗಳಿವೆ ಎಂದರು.
ಪತ್ರಕರ್ತ ರವೀಂದ್ರ ಭಟ್ ಐನಕೈ, ಖಾಸಗಿ ವಾಹಿನಿ ನಿರೂಪಕ ರಂಗನಾಥ ಭಾರದ್ವಾಜ್ ಉಪಸ್ಥಿತರಿದ್ದರು. ಡಾ.ಪ್ರಖ್ಯಾತ್ ಶೆಟ್ಟಿ ಹಾಗೂ ತೋಳ್ಪಡಿತ್ತಾಯ ಸಹೋದರರಿಂದ ಯಕ್ಷಗಾನ ಶೈಲಿಯ ಪ್ರಾರ್ಥನೆ ನಡೆಯಿತು.
ಸೆಲ್ಕೋ ಸೋಲಾರ್ ನ ಸಿಇಒ ಮೋಹನ್ ಭಾಸ್ಕರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಗೋವಿಂದ ಪ್ರಸಾದ್ ಕಜೆ ಸ್ವಾಗತಿಸಿದರು.
ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿದರು.ಸೆಲ್ಕೋ ಡಿಜಿಎಂ ಗುರು ಪ್ರಸಾದ್ ಶೆಟ್ಟಿ ವಂದಿಸಿದರು.