ಬೆಳ್ತಂಗಡಿ: “ವ್ಯಸನ ಎಂಬುದು ಮಾನಸಿಕ ದೌರ್ಬಲ್ಯ. ಅವರವರ ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳಿಗೆ ಸಂಬಂಧಿಸಿದ್ದು. ಮನಸ್ಸು ಮತ್ತು ಬುದ್ಧಿ ಬಹಳ ಚಂಚಲವಾಗಿರುತ್ತದೆ. ಅವುಗಳ ಹತೋಟಿ ಮತ್ತು ನಿರ್ವಹಣೆ ಮಾಡುವುದೇ ಬಹಳ ಮುಖ್ಯವಾದ ವಿಷಯ. ಮನಸ್ಸು ಮಾಡಿದರೆ ನಾವು ಯಾವುದನ್ನೂ ಸಾಧಿಸಬಹುದು. ಬುದ್ಧಿ ಹಾಳಾದರೆ ಒಂದೇ ಕ್ಷಣದಲ್ಲಿ ಸೋಲವನ್ನು ಅನುಭವಿಸಬಹುದು. ಇದಕ್ಕಾಗಿ ದೃಢ ಸಂಕಲ್ಪವನ್ನು ಮಾಡಿಕೊಂಡು ಅಮೂಲ್ಯವಾದ ಬದುಕನ್ನು ರೂಪಿಸಿಕೊಳ್ಳಬೇಕು. ಅಂತರಂಗ ಶುದ್ಧಿಯಿಲ್ಲದೆ ಮಾಡುವ ಪೂಜೆ ಪುನಸ್ಕಾರಗಳು ವ್ಯರ್ಥ. ವ್ಯಸನಮುಕ್ತರಾಗಿ 100 ದಿನಗಳ ಬಳಿಕ ಕ್ಷೇತ್ರಕ್ಕೆ ಬಂದು ಅಂತರಂಗಶುದ್ಧಿಯಿಂದ ಮಾಡುವ ಪೂಜೆ ಶ್ರೀ ಮಂಜುನಾಥ ಸ್ವಾಮಿಗೆ ಸಲ್ಲುತ್ತದೆ’’ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು 183ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. “ವ್ಯಸನಿಗೆ ಒಂದು ತಟ್ಟೆಯಲ್ಲಿ ಅನ್ನ, ಇನ್ನೊಂದು ತಟ್ಟೆಯಲ್ಲಿ ಗಲೀಜು ತಂದು ಇಟ್ಟಾಗ ಅವನು ಅನ್ನವನ್ನೇ ಆಯ್ಕೆ ಮಾಡುತ್ತಾನೆ ಹೊರತು ಗಲೀಜನ್ನಲ್ಲ. ಅದರಂತೆ ಮುಂದಿನ ದಿನಗಳಲ್ಲಿ ಹೊಲಸುಗಳನ್ನೆಲ್ಲ ತೊಳೆದುಕೊಂಡು ಜೀವನದಲ್ಲಿ ಒಳ್ಳೆಯ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ನವ ಜೀವನವನ್ನು ಹೊಂದಿರಿ’ ಎಂದು ಆಶೀರ್ವದಿಸಿದರು.
ಶಿಬಿರದಲ್ಲಿ ಕರ್ನಾಟಕ ರಾಜ್ಯದ 20 ಜಿಲ್ಲೆಗಳಿಂದ 69 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರವನ್ನು ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾೈಸ್ ರವರ ನಿರ್ದೇಶನದಲ್ಲಿ ಮೋಹನ್ ಕೆ. ಯೋಜನಾಧಿಕಾರಿ, ನಾಗೇಂದ್ರ ಹೆಚ್.ಎಸ್ ಶಿಬಿರಾಧಿಕಾರಿಗಳಾಗಿ ಮತ್ತು ಪ್ರೆಸಿಲ್ಲಾ ಡಿ’ಸೋಜ ಆರೋಗ್ಯ ಸಹಾಯಕಿಯಾಗಿ ಸಹಕರಿಸಿದರು.
ಮುಂದಿನ ವಿಶೇಷ ಶಿಬಿರವು ದಿನಾಂಕ:05.09.2022 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.