ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿರಿ ಕಾರ್ಯಕರ್ತರು ಹಾಗು ಸಿಬ್ಬಂದಿಗಳಿಗಾಗಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ‘ಸಿರಿ ಹಬ್ಬ’ ಉಜಿರೆ ಹಳೆಪೇಟೆ ಬಳಿ ಇರುವ ಸಿರಿ ಕೇಂದ್ರ ಕಛೇರಿಯಲ್ಲಿ ಜರುಗಿತು.
ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ಧನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉಷಾ ಜನಾರ್ಧನ್ ಅವರು ಉದ್ಘಾಟಿಸಿ, ಶುಭ ಕೋರಿದರು.
ಸಮಾರೋಪ ಸಮಾರಂಭದಲ್ಲಿ ಉಜಿರೆಯ ಉದ್ಯಮಿ ಹಾಗೂ ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ರಾಜೇಶ್ ಪೈ ಭಾಗವಹಿಸಿ , ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ ಹೆಗ್ಗಡೆಯವರ ಕನಸಿನ ಕೂಸಾಗಿರುವ ಸಿರಿ ಸಂಸ್ಥೆ ಮುಂದಿನ ವರ್ಷ ಈ ಸಿರಿ ಹಬ್ಬವನ್ನು ಬೆಳ್ತಂಗಡಿಯಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಕಟ್ಟಡದಲ್ಲಿ ಆಚರಿಸುವಂತಾಗಲಿ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಸ್ಪರ್ಧೆಯ ತೀರ್ಪುಗಾರರಾದ ಉಜಿರೆ ಶ್ರೀ ಧ.ಮಂ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಶ್ರುತಿ ಜೈನ್, ಉಜಿರೆ ಸಂಧ್ಯಾ ಟ್ರೆಡರ್ಸ್ ಮಾಲಕಿ ಅರ್ಚನಾ ರಾಜೇಶ್ ಪೈ, ಉಷಾ ಜನಾರ್ಧನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯ ನಿರ್ದೇಶಕ ಜನಾರ್ಧನ್ , ಪುಷ್ಪರಾಜ್ ಜೈನ್ ಮೊದಲಾದವರು ಭಾಗವಹಿಸಿದ್ದರು. ಸಂಸ್ಥೆಯ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಸಿಬ್ಬಂದಿಗಳಿಗೆ ಹಾಗೂ ಮಾರುಕಟ್ಟೆ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ ಸಿಬ್ಬಂದಿಗಳನ್ನು ಗೌರವಿಸಿ, ಅಭಿನಂದಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.
ಅಗರಬತ್ತಿ ಘಟಕದ ಮೇಲ್ವಿಚಾರಕ ಸತೀಶ್ ಸ್ವಾಗತಿಸಿ, ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ನಿರ್ದೇಶಕ ಪ್ರಸನ್ನ ಯು ಪ್ರಸ್ತಾವಿಸಿದರು. ಸಂಸ್ಥೆಯ ಆಂತರಿಕ ಲೆಕ್ಕ ಪರಿಶೋಧಕ ವಲೇರಿಯನ್ ವೇಗಸ್ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿ, ಗೋದಾಮು ವಿಭಾಗದ ಪ್ರಬಂಧಕ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಮಾರುಕಟ್ಟೆ ವಿಭಾಗದ ಉಪಪ್ರಬಂಧಕ ವಿನ್ಸೆಂಟ್ ಲೋಬೊ ವಂದಿಸಿದರು.